ಕೊಪ್ಪಳ: ವೈಯಕ್ತಿಕ ಸ್ಥಾನಮಾನ ಹಾಗೂ ಸಾಮರ್ಥ್ಯ ಇದ್ದಾಗ ಅದನ್ನು ಬಳಸಿ ಬೀಸಾಡುವಲ್ಲಿ ಬಿಜೆಪಿಯವರು ಶೂರರು. ಜನಾರ್ದನ ರೆಡ್ಡಿ ವಿಷಯದಲ್ಲಿಯೂ ಬಿಜೆಪಿ ಇದೇ ರೀತಿ ನಡೆದುಕೊಂಡಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಜಿಲ್ಲೆಯ ಚುನಾವಣಾ ಸಮಿತಿ ಸಭೆಗೂ ಪೂರ್ವದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ‘ಬಿಜೆಪಿಯನ್ನು ನಂಬಿದ್ದವರಿಗೆ ಅದರ ನೈಜತೆ ಏನು ಎನ್ನುವುದು ಈಗ ಗೊತ್ತಾಗಿದೆ. ಒಂದು ಕಾಲದಲ್ಲಿ ರೆಡ್ಡಿ ದೆಹಲಿಗೆ ಹೋಗುತ್ತಾರೆ ಎಂದರೆ ಕೇಂದ್ರದ ನಾಯಕರು ಅವರನ್ನು ಸ್ವಾಗತಿಸಲು ಕಾಯುತ್ತಿದ್ದರು. ಈಗ ಅವರೇ ಪಕ್ಷದಿಂದ ಹೊರಬಂದಿದ್ದಾರೆ’ ಎಂದರು.
‘ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಹಾಗೂ ಈಗಿನ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಲ್ಲಿ ಕೆಲವರನ್ನು ಮೂಲೆಗುಂಪು ಮಾಡಲಾಗಿದೆ. ನನ್ನನ್ನು ಹಿಂದೆ ಅನರ್ಹ ಮಾಡಿ ದೆಹಲಿಗೆ ಕಳುಹಿಸಿದ್ದಾಗಲೇ ಜ್ಞಾನೋದಯವಾಗಿದೆ. ರೆಡ್ಡಿ ಈಗ ಎಚ್ಚರಗೊಂಡಿದ್ದಾರೆ’ ಎಂದರು.
‘ಹೊಸ ಪಕ್ಷ ಉದಯದಿಂದ ಯಾರಿಗೆ ಲಾಭವಾಗುತ್ತದೆ ಎನ್ನುವ ವಿಚಾರ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಬಿಜೆಪಿಯಿಂದ ಜನಾರ್ದನ ರೆಡ್ಡಿಯವರಿಗೆ ಬಹಳಷ್ಟು ಅನ್ಯಾಯವಾಗಿದೆ. ಯಾರೇ ಬಂದರೂ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆ: ಜಿಲ್ಲೆಯ ಕೊಪ್ಪಳ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ವಿಧಾನಸಭಾ ಕ್ಷೇತ್ರಗಳ ಜಿಲ್ಲಾ ಚುನಾವಣೆ ಸಮಿತಿ ಸಭೆ ನಡೆಯಿತು.
ಚುನಾವಣಾ ಸಮಿತಿಯ ಜಿಲ್ಲೆಯ ಉಸ್ತುವಾರಿ ಶರಣಪ್ಪ ಟಿ. ಸುಣಗಾರ, ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಬ್ಲಾಕ್ ಅಧ್ಯಕ್ಷರು, ಆಕಾಂಕ್ಷಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪಟ್ಟಣ ಪಂಚಾಯಿತಿ, ಪುರಸಭೆ ಸದಸ್ಯರು ಹಾಗೂ ಕೆಪಿಸಿಸಿ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.