ಕೊಪ್ಪಳ: ಭವ್ಯ ಭಾರತದಲ್ಲಿ ಭಾವನೆಗಳ ತಾಕಲಾಟದಿಂದ ಭಾವ ಬದಲಾಗಿದೆ. ಕೇಳಿಸಿಕೊಳ್ಳುವ ಕಿವಿಗಳಿಗಿಂತ, ಅಶ್ಲೀಲ ಮಾತನಾಡುವ ನಾಲಿಗೆ ಉದ್ದವಾಗಿದೆ ಎಂದು ಬಂಡಾಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.
ಅವರು ಸಮೀಪದ ಭಾಗ್ಯನಗರ ಬಾಲಾಜಿ ಫಂಕ್ಷನ್ ಹಾಲ್ನಲ್ಲಿ ನಡೆದ ಡಾ.ಸಿ.ಬಿ.ಚಿಲ್ಕರಾಗಿ ಅವರ ಬೆಟ್ಟದೂರ ಅಲ್ಲಮ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಭೂತವನ್ನು ಅರಿತುಕೊಳ್ಳದೇ ವರ್ತಮಾನವನ್ನು ಅರಿಯುವುದು ಸಾಧ್ಯವಿಲ್ಲ. ಇತಿಹಾಸದ ಭವಿಷ್ಯ ಕಟ್ಟಲು ಭೂತ ಮತ್ತು ಭವಿಷ್ಯಗಳ ಸಂವಾದ ನಡೆದಾಗ ಮಾತ್ರ ನೈಜ ಇತಿಹಾಸ ನಿರ್ಮಾಣ ಸಾಧ್ಯವಾಗುತ್ತದೆ. ಪ್ರಸ್ತುತ ಸನ್ನಿವೇಶ ತಮ್ಮ ಮೇಲಾಟಗಳನ್ನೇ ಸಾಧಿಸುವ ಉದ್ದೇಶದಿಂದ ಬಾಯಿ ಬಂದಂತೆ ಅಶುದ್ಧ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನೆಲ್ಲವನ್ನು ನಾವು ಸಮರ್ಥವಾಗಿ ಎದುರಿಸಬೇಕು ಎಂದರು.
ರಾಜಕಾರಣ ತಿಕ್ಕಾಟದ ನಡುವೆ ಮಹಿಳೆ, ಶೋಷಣೆಯ ವಿಷಯಗಳು ಗೌಣವಾಗುತ್ತಿವೆ. ಸಾಹಿತಿಯಾದವನು ತ್ರಿಕಾಲ ಜ್ಞಾನಿಯಾಗಿರಬೇಕು. ಭೂತ, ಭವಿಷ್ಯ, ವರ್ತಮಾನದ ಅರಿವು ಇರಬೇಕು. ಬಂಡಾಯ ಸಾಹಿತ್ಯ ತನ್ನ ಸತತ ಹೋರಾಟದಿಂದ ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದ ಜನರನ್ನು ಮುಂದೆ ತಂದ ಸಾರ್ಥಕತೆ ಇದೆ. ಬಂಡಾಯವೆಂದರೆ ಹಿಂಸೆಯಲ್ಲ. ಅದು ತಿದ್ದುವ ಬಗೆ ಎಂದು ವಿವರಿಸಿದರು.
ಹಿರಿಯ ಸಾಹಿತಿ ಅಲ್ಲಮಪ್ರಭು ಪಾಟೀಲ ಬಂಡಾಯದ ಸಾಕ್ಷಿ ಪ್ರಜ್ಞೆ. ಅವರ ಕುರಿತು ಪುಸ್ತಕ ಹೊರತಂದಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ. ಅವರೇ ಹೇಳುವಂತೆ ಮಂದಿರಕ್ಕೆ ಹೋದೆ ಹಿಂದೂ ಆಗಲಿಲ್ಲ. ಮಸೀದಿಗೆ ಹೋದೆ ಮುಸ್ಲಿಮನಾಗಲಿಲ್ಲ. ಚರ್ಚಿಗೆ ಹೋದೆ ಕ್ರಿಶ್ಚಿಯನ್ ಆಗಲಿಲ್ಲ. ನಾನು ಮಾನವನಾದೆ ಎಂದು ಕವಿತೆಯನ್ನು ಉದ್ಘರಿಸಿದರು.
ಸಾಹಿತಿ ಈಶ್ವರ ಹತ್ತಿ ಅವರ ‘ಅನಿಮಲ್ ಫಾರ್ಮ್’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯಸಭಾ ಸದಸ್ಯ ಡಾ.ಎಲ್.ಹನಮಂತಯ್ಯ, ಇಂಗ್ಲಿಷ್ ಲೇಖಕ ಜಾರ್ಜ್ ಅರ್ವೆಲ್ ಬರೆದ ‘ಅನಿಮಲ್ ಫಾರ್ಮ್’ ಇಂಗ್ಲಿಷ್ನ ಶ್ರೇಷ್ಠ ಕೃತಿಗಳಲ್ಲಿ ಒಂದು. ಅದನ್ನು ಇಲ್ಲಿಯವರೆಗೂ ಯಾರೂ ತರದೇ ಇರುವುದು ಸೋಜಿಗ ಮೂಡಿಸುತ್ತದೆ. ಅಲ್ಲದೆ ಅನುವಾದದ ದೃಷ್ಟಿಯಿಂದ ಇದು ಕನ್ನಡದ್ದೇ ಎನ್ನುವಷ್ಟ ಸಹಜ ನಿರೂಪಣೆ ಮಾಡಿದ ಹತ್ತಿ ಅವರ ಸಾಧನೆ ಮೆಚ್ಚುವಂತದ್ದು ಎಂದರು.
ಸಾಹಿತಿ ಎಚ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಯಮಿ ಶ್ರೀನಿವಾಸ್ ಗುಪ್ತಾ, ಡಾ.ಚಿಲ್ಕರಾಗಿ, ಈಶ್ವರ ಹತ್ತಿ,. ಡಿ.ಎಂ.ಬಡಿಗೇರ, ಅಂದಪ್ಪ ಬೆಣಕಲ್, ಶಿ.ಕಾ.ಬಡಿಗೇರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.