ಗಂಗಾವತಿ: ಮೊಹರಂ ಎಲ್ಲಾ ಸಮಾಜದವರು ಒಗ್ಗಟ್ಟಾಗಿ ಆಚರಿಸುವ ಹಬ್ಬವಾಗಿದ್ದು, ಈ ಹಬ್ಬವನ್ನ ಭಾವೈಕ್ಯತೆ ಜೊತೆಗೆ ಶಾಂತಿಯುತವಾಗಿ ಆಚರಿಸಬೇಕು’ ಎಂದು ಡಿವೈಎಸ್ಪಿ ಸಿದ್ಧಲಿಂಗಪ್ಪಗೌಡ ಮಾಟೀಲ ಹೇಳಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಮೊಹರಂ ಹಬ್ಬ ಆಚರಣೆ ಬಗ್ಗೆ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ಮೊಹರಂ ಹಬ್ಬದ ಆಚರಣೆ ಅರಿತುಕೊಂಡು ಅಚ್ಚುಕಟ್ಟಾಗಿ ಆಚರಿಸಬೇಕು. ಯಾವುದೇ ಕಾರಣಕ್ಕೆ ವೈಯಕ್ತಿಕ ಕಾರಣಗಳಿಗೆ ಆಚರಣೆ ವೇಳೆ ಗೊಂದಲ ಸೃಷ್ಟಿಸಿ, ಗಲಾಟೆ ಮಾಡುವಂತಿಲ್ಲ. ಹಿಂದೂ-ಮುಸ್ಲಿಂ ಸಮಾಜದವರು ಭಾವೈಕ್ಯತೆಯಿಂದ ಆಚರಣೆ ಮಾಡುವ ಹಬ್ಬ ಇದಾಗಿದ್ದು, ಎಲ್ಲರೂ ಅನ್ಯೋನ್ಯತೆಯಿಂದ ಹಬ್ಬ ಆಚರಿಸಬೇಕು’ಎಂದರು.
‘ಹಬ್ಬ ಆಚರಣೆ ನೆಪದಲ್ಲಿ ಗಲಾಟೆ ಮಾಡಿದರೆ ಮುಂದಿನ ವರ್ಷದಿಂದ ಗಲಾಟೆ ನಡೆದ ಸ್ಥಳಗಳಲ್ಲಿ ತಾಲ್ಲೂಕು ಆಡಳಿತದಿಂದ ಹಬ್ಬ ನಿಷೇಧ ಮಾಡಲಾಗುತ್ತದೆ. ಮೊಹರಂ ದೇವರ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ನಗರಸಭೆ, ಜೆಸ್ಕಾಂ ಇಲಾಖೆಯಿಂದ ವಿದ್ಯುತ್, ಕುಡಿಯುವ ನೀರು, ಸ್ವಚ್ಛತೆ ಕಾಪಾಡಲಾಗುವುದು’ ಎಂದು ಹೇಳಿದರು.
ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ್ ಮಾಳಿ, ನಗರ ಠಾಣೆ ಪಿಎಸ್ಐ ನಾಗರಾಜ, ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.