ಗಂಗಾವತಿ: ತಾಲ್ಲೂಕಿನ ಆನೆಗೊಂದಿಯ ಆದಿಶಕ್ತಿ ದುರ್ಗಾದೇವಿ ದೇಗುಲದ ಗೋಶಾಲೆಯ ಆಕಳು ಸೋಮವಾರ ಚಿರತೆ ದಾಳಿಗೆ ಸಾವನ್ನಪ್ಪಿದೆ. ಗೋಶಾಲೆಯ ಹಸುಗಳನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ದಾಳಿ ನಡೆದಿದ್ದು, ದನಗಾಹಿಗಳ ಕೂಗಿಗೆ ಚಿರತೆ ಓಡಿ ಹೋಗಿದೆ.
ಕಳೆದ ವಾರ ಇದೇ ಸ್ಥಳದಲ್ಲಿ ದೇಗುಲದ ಅಡುಗೆಭಟ್ಟರನ್ನು ಚಿರತೆ ಕೊಂದು ಹಾಕಿತ್ತು. ಕೆಲ ದಿನಗಳ ಹಿಂದೆ ಪ್ರವಾಸಕ್ಕೆ ಕುಟುಂಬದ ಜೊತೆ ಬಂದಿದ್ದ ಹೈದರಾಬಾದ್ನ ಬಾಲಕನ ಮೇಲೂ ದಾಳಿ ನಡೆದಿತ್ತು.
ಚಿರತೆ ಸೆರೆಗಾಗಿ ವಾರದಿಂದ ಶ್ರಮಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧೆಡೆ ಏಳು ಬೋನ್ಗಳನ್ನು ಇಟ್ಟಿದ್ದು, ಟ್ರ್ಯಾಪ್ ಕ್ಯಾಮೆರಾಗಳನ್ನೂ ಅಳವಡಿಸಿದ್ದಾರೆ. ಆದರೆ, ಅದು ಸೆರೆ ಸಿಗದಿರುವುದು ಸಣಾಪುರ, ಜಂಗ್ಲಿ ರಂಗಾಪುರ, ಹನುಮನಹಳ್ಳಿ, ರಾಂಪುರ ಹಾಗೂ ಮಲ್ಲಾಪುರ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಘಟನಾ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಭೇಟಿ ನೀಡಿ ಪರಿಶೀಲಿಸಿದರು. ‘ಗುಡ್ಡಗಾಡು ಪ್ರದೇಶವಾದ್ದರಿಂದ ಚಿರತೆ ಸೆರೆ ಕಷ್ಟವಾಗುತ್ತಿದೆ. ಮತ್ತಷ್ಟು ಬೋನ್ಗಳನ್ನು ಅಳವಡಿಸಿ, ಚಿರತೆಯನ್ನು ಸಾಧ್ಯವಾದಷ್ಟು ಬೇಗ ಸೆರೆ ಹಿಡಿಯಲಾಗುವುದು. ಗ್ರಾಮಸ್ಥರು ಸಂಜೆ ವೇಳೆ ಒಬ್ಬೊಬ್ಬರೇ ತಿರುಗಾಡಬಾರದು. ಬಹಳ ಸುರಕ್ಷತೆಯಿಂದ ಇರಬೇಕು’ ಎಂದು ಅವರು ತಿಳಿಸಿದರು.
ಶಾಸಕ ಪರಣ್ಣ ಮುನವಳ್ಳಿ, ಡಿಎಫ್ಒ ಹರ್ಷಾಭಾನು, ತಹಶೀಲ್ದಾರ್ ಎಂ.ರೇಣುಕಾ, ವಲಯ ಅರಣ್ಯಾಧಿಕಾರಿ ಶಿವರಾಜ್ ಮೇಟಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಹಾಗೂ ಅರಣ್ಯಾಧಿಕಾರಿ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.