ADVERTISEMENT

ಬಾಲ್ಯವಿವಾಹ: ಪೋಷಕರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 13:24 IST
Last Updated 14 ಜನವರಿ 2022, 13:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಪ್ಪಳ: ಗಂಗಾವತಿ ನಗರ ವ್ಯಾಪ್ತಿಯಲ್ಲಿನ.4., 2021ರಂದು ಗಂಗಾವತಿ ನಗರದ ಪಾಡಗುತ್ತಿ ಕಲ್ಯಾಣ ಮಂಟಪದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಮಾಡಿದ ತಂದೆ, ತಾಯಿ, ವರ ಮತ್ತು ವರನ ತಂದೆ, ತಾಯಿಗಳು ಹಾಗೂ ವಿವಾಹಕ್ಕೆ ಅವಕಾಶ ನೀಡಿದ ಪಾಡಗುತ್ತಿ ಕಲ್ಯಾಣ ಮಂಟಪದ ವ್ಯವಸ್ಥಾಪಕರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ರೀತಿಯ ಕೃತ್ಯಕ್ಕೆ ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ-2006) ಕಾಯ್ದೆ-2016ರಡಿಯಲ್ಲಿ ಕನಿಷ್ಠ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.

ಬಾಲ್ಯವಿವಾಹದಿಂದ ಮಕ್ಕಳ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿತು, ಮಕ್ಕಳಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಅನ್ನು ಜಾರಿಗೊಳಿಸಿದೆ. ರಾಜ್ಯವನ್ನು 'ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು' ಕರ್ನಾಟಕ ಸರ್ಕಾರ ಬಾಲ್ಯವಿವಾಹ ನಿಷೇಧ ಕಾಯ್ದೆ-2006ಕ್ಕೆ ಕರ್ನಾಟಕ ತಿದ್ದುಪಡಿ-2016ರಲ್ಲಿ ತಿದ್ದುಪಡಿ ತಂದಿದೆ.

ADVERTISEMENT

ಈ ತಿದ್ದುಪಡಿಯು ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ. ತಿದ್ದುಪಡಿಯನ್ವಯ ರಾಜ್ಯದಲ್ಲಿ ನಡೆಯುವ ಎಲ್ಲ ಬಾಲ್ಯವಿವಾಹಗಳು ‘ಅಸಿಂಧು ವಿವಾಹವಾಗಿರುತ್ತವೆ’. ಈ ಬಾಲ್ಯವಿವಾಹಕ್ಕೆ ಯಾವುದೇ ರೀತಿಯ ಕಾನೂನಿನ ಮಾನ್ಯತೆಯಿರುವುದಿಲ್ಲ. ಇದರಿಂದ ಬಾಲಕಿಗೆ ಲಭ್ಯವಾಗಬೇಕಾದ ಸೇವೆಗಳು, ಅವಕಾಶಗಳಿಂದ ಬಾಲಕಿಯು ವಂಚಿತಳಾಗುತ್ತಾಳೆ. ಅಲ್ಲದೇ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದ ಪುರುಷನಿಗೆ, ಬಾಲ್ಯವಿವಾಹಕ್ಕೆ ಸಹಕಾರ, ಪ್ರೋತ್ಸಾಹ ನೀಡಿದವರು, ಭಾಗವಹಿಸಿದವರಿಗೂ ಸಹ ಕನಿಷ್ಠ 1 ವರ್ಷದಿಂದ 2 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.

ಆದ್ದರಿಂದ ಕಲ್ಯಾಣ ಮಂಟಪಗಳ ಮಾಲೀಕರುಗಳಿಗೆ, ಸಾಮೂಹಿಕ ವಿವಾಹ ಆಯೋಜಕರಿಗೆ, ದೇವಸ್ಥಾನಗಳ ಆಡಳಿತ ಮಂಡಳಿಗಳ ಮುಖ್ಯಸ್ಥರು ನಿಮ್ಮ ಪ್ರದೇಶ/ವ್ಯಾಪ್ತಿಯಲ್ಲಿ ಬಾಲ್ಯವಿವಾಹಕ್ಕೆ ಆಸ್ಪದ ನೀಡಬೇಡಿ, ನೀಡಿದಲ್ಲಿ ಕಾನೂನು ರೀತ್ಯಾ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.