ಗಂಗಾವತಿ: ಇತಿಹಾಸ ತಿಳಿದುಕೊಳ್ಳದೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳು ಕಡ್ಡಾಯವಾಗಿ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ತಾಲ್ಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟದ ಸಮೀಪ ಭಾನುವಾರ ಆನೆಗೊಂದಿ ಉತ್ಸವದ ಅಂಗವಾಗಿ ಪಾರಂಪರಿಕ ನಡಿಗೆ ಜಾಥಾಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು.
ಇತಿಹಾಸವನ್ನು ತಿಳಿಸಬೇಕು ಎನ್ನುವ ಉದ್ದೇಶದಿಂದ ಈ ಉತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಉತ್ಸವಗಳಲ್ಲಿ ಮಕ್ಕಳ ಸೇರಿದಂತೆ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ, ಇತಿಹಾಸವನ್ನು ತಿಳಿದುಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಇತಿಹಾಸವನ್ನು ನಾವುಗಳು ತಪ್ಪದೆ ಅರಿತುಕೊಂಡಿರಬೇಕು. ಯಾವುದೇ ಕಾರಣಕ್ಕೂ ಮಾಹಿತಿ ಇಲ್ಲದಂತೆ ಇರಬೇಕು. ಹಾಗಾಗಿ ಮಕ್ಕಳು ಕಡ್ಡಾಯವಾಗಿ ನಮ್ಮಲ್ಲಿ ಇತಿಹಾಸವನ್ನು ತಿಳಿದುಕೊಳ್ಳಬೇಕು. ನಂತರ ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿ 100 ಅಧಿಕ ಮಕ್ಕಳಿಗೆ ನಡಿಗೆ ಉದ್ದಕ್ಕೂ ದೊರೆಯುವ ವಿಜಯನಗರ ಕಾಲದ ಸ್ಮಾರಕಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಪಾರಂಪರಿಕ ನಡಿಗೆಯನ್ನು ಅಂಜನಾದ್ರಿ ಪರ್ವತ, ಪಂಪಾಸರೋವರ, ಪ್ರಾಚೀನ ಐತಿಹಾಸಿಕ ಚಿತ್ರಕಲೆ, ಗವಿರಂಗನಾಥ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ, ಆನೆಗೊಂದಿ ಅಗಸಿ, ರಂಗನಾಥ ದೇವಸ್ಥಾನ, ಗಗನಮಹಲ್, ಜೈನ್ಬಸಿದಿ, ಚಿಂತಾಮಣಿ ಮಠ ಸೇರಿದಂತೆ ನಾನಾ ಸ್ಥಳಗಳವರೆಗೆ ನಡೆಸಿ, ಮಕ್ಕಳಿಗೆ ಸ್ಥಳಗಳಾ ಮಾಹಿತಿಯನ್ನು ನೀಡಲಾಯಿತು.
ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ರಘುನಾಥನಂದನ್ ಮೂರ್ತಿ, ಕೊಪ್ಪಳ ಎಸಿ ಸಿ.ಡಿ.ಗೀತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜನಾದೇವಿ, ತಹಸೀಲ್ದಾರ ಎಲ್.ಡಿ.ಚಂದ್ರಕಾಂತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.