ADVERTISEMENT

ಕಾಂಗ್ರೆಸ್‌ ನವ ಸಂಕಲ್ಪ ಶಿಬಿರ ನಾಳೆ

ಮಾಲೆ ಧರಿಸಿ ಕಾಂಗ್ರೆಸ್‌ ನಾಯಕರಿಂದ ಅಂಜನಾದ್ರಿಗೆ ಯಾತ್ರೆ: ತಂಗಡಗಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 13:02 IST
Last Updated 28 ಜೂನ್ 2022, 13:02 IST
ಶಿವರಾಜ ತಂಗಡಗಿ
ಶಿವರಾಜ ತಂಗಡಗಿ   

ಕೊಪ್ಪಳ: ನಗರದ ಶಿವಶಾಂತವೀರ ಮಂಗಳ ಭವನದಲ್ಲಿ ಜೂ. 30ರಂದು ಬೆಳಿಗ್ಗೆ 10.30ಕ್ಕೆ ಕಾಂಗ್ರೆಸ್‌ ನವಸಂಕಲ್ಪ ಶಿಬಿರ ಹಮ್ಮಿಕೊಂಡಿದೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ’ವಿವಿಧ ವಿಷಯಗಳ ಕುರಿತು ಮಾತನಾಡಲು ಐದು ಸಮಿತಿಗಳನ್ನು ರಚಿಸಲಾಗಿದೆ‘ ಎಂದರು.

ಆರ್ಥಿಕ ನೀತಿ ಮತ್ತು ಬೆಲೆ ಏರಿಕೆ (ಬಸವರಾಜ ರಾಯರಡ್ಡಿ), ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ (ಇಕ್ಬಾಲ್‌ ಅನ್ಸಾರಿ), ಸಂಘಟನೆ (ರಾಘವೇಂದ್ರ ಹಿಟ್ನಾಳ), ರೈತರು ಮತ್ತು ಕೃಷಿ (ಅಮರೇಗೌಡ ಬಯ್ಯಾಪುರ), ಯುವ, ಶಿಕ್ಷಣ, ಮಹಿಳೆ ಮತ್ತು ಸಬಲೀಕರಣ (ಮಲ್ಲಿಕಾರ್ಜುನ ನಾಗಪ್ಪ) ಮತ್ತು ರಾಜಕೀಯ ಹಾಗೂ ಕೆಪಿಸಿಸಿ ನೀತಿಗಳ ಅನುಷ್ಠಾನ (ಶಿವರಾಮಗೌಡ) ವಿಷಯಗಳ ಚರ್ಚೆ ಜರುಗಲಿದೆ.

ADVERTISEMENT

ಅಂಜನಾದ್ರಿಗೆ ಒತ್ತು: ‘ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ ಪ‍್ರದೇಶ ಅಭಿವೃದ್ಧಿಗೆ ಒತ್ತು ಕೊಡಲಾಗುವುದು’ ಎಂದು ತಂಗಡಗಿ ಹೇಳಿದರು.

’ಡಿಸೆಂಬರ್‌ನಲ್ಲಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ನಾಯಕರು ಮಾಲೆ ಧರಿಸಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರೀಯ ನಾಯಕರೂ ಬರುವ ನಿರೀಕ್ಷೆಯಿದೆ. ಕಾಟಚಾರಕ್ಕೆ ಎನ್ನುವಂತೆ ಒಂದು ಸಭೆ ಮಾಡಿ ಅಂಜನಾದ್ರಿ ಅಭಿವೃದ್ಧಿ ಮಾಡುತ್ತೇವೆ ಎಂದು ಬಿಜೆಪಿ ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ನಾವು ಕೆಲಸ ಮಾಡಿ ನಂತರ ಮಾತನಾಡುತ್ತೇವೆ. ಬಿಜೆಪಿಯವರ ರೀತಿ ಸುಳ್ಳು ಹೇಳುವುದಿಲ್ಲ‘ ಎಂದು ವಿರುದ್ಧ ಹರಿಹಾಯ್ದರು.

ಆಕಾಂಕ್ಷಿಗಳು ಸಹಜ: ಗಂಗಾವತಿ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆಯಲ್ಲ ಎನ್ನುವ ಪ್ರಶ್ನೆಗೆ ’ಇದು ಪಕ್ಷ ಬಲಿಷ್ಠವಾಗಿದೆ ಎನ್ನುವು ಸಂದೇಶ ರವಾನಿಸುತ್ತದೆ. ಚುನಾವಣೆಯ ಸಮಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವುದು ಸಹಜ. ಯಾರಿಗೆ ಟಿಕೆಟ್‌ ಕೊಡಬೇಕು ಎನ್ನುವುದನ್ನು ಹೈಕಮಾಂಡ್‌ ತೀರ್ಮಾನಿಸಲಿದೆ‘ ಎಂದರು.

’ಕಮಿಷನ್‌ನಲ್ಲಿ ಕೇಂದ್ರ ನಾಯಕರು’

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಗುತ್ತಿಗೆದಾರರ ಕಡೆಯಿಂದ ಕಡಿಮೆ ಪಾಲು ಬಂದಿದ್ದಕ್ಕೆ ಉಳಿದ ಪಾಲನ್ನೂ ಪಡೆದುಕೊಂಡು ಹೋಗಲು ಕೇಂದ್ರ ತಂಡ ಈಗ ರಾಜ್ಯಕ್ಕೆ ಬಂದಿದೆ. ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ ಶೇ 40ರಷ್ಟು ಕಮಿಷನ್‌ ವ್ಯವಹಾರದಲ್ಲಿ ಕೇಂದ್ರದ ನಾಯಕರು ಭಾಗಿಯಾಗಿದ್ದಾರೆ ಎಂದು ತಂಗಡಗಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.