ಕಾರಟಗಿ: ಪಟ್ಟಣದ ಗ್ರಾಮ ದೇವತೆ ದ್ಯಾವಮ್ಮದೇವಿ ದೇಗುಲ ನಿರ್ಮಾಣ ಕೆಲಸ ಭರದಿಂದ ಸಾಗಿದ್ದು, ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ಸಮಾಜದ ಪರವಾಗಿ ₹3.01 ಲಕ್ಷ ದೇಣಿಗೆಯನ್ನು ಶುಕ್ರವಾರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಬಿ.ಕಾಶಿವಿಶ್ವನಾಥ, ಖಜಾಂಚಿ ಶ್ರೀಕಾಂತ ಈಡಿಗೇರ, ತಾಲ್ಲೂಕಾಧ್ಯಕ್ಷ ವೀರೇಶ ಈಡಿಗೇರ, ನಗರ ಘಟಕದ ಅಧ್ಯಕ್ಷ ಶ್ರೀಹರಿ, ಸಮಾಜದ ಹಿರಿಯ ನಾಗಪ್ಪ ಯರಡೋಣ, ಶ್ಯಾಮಣ್ಣ ಯತ್ನಟ್ಟಿ, ನಾರಾಯಣಪ್ಪ ಈಡಿಗೇರ ನೇತೃತ್ವದಲ್ಲಿ ನಿರ್ಮಾಣ ಉಸ್ತುವಾರಿ ವಹಿಸಿರುವ ಮಾಜಿ ಸಚಿವ ನಾಗಪ್ಪ ಸಾಲೋಣಿ, ಉದ್ಯಮಿ ಗೋವಿಂದರಾಜ್ ಶ್ರೇಷ್ಠಿಗೆ ದೇಣಿಗೆ ಸಲ್ಲಿಸಿದರು.
ಆರ್ಯ ಈಡಿಗ ಸಮಾಜದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಈಡಿಗೇರ, ಉಪಾಧ್ಯಕ್ಷ ವೆಂಕಟೇಶ ಈಡಿಗೇರ, ಸಂಘಟನಾ ಕಾರ್ಯದರ್ಶಿ ಶರಣಪ್ಪ ಈಡಿಗೇರ, ನಗರ ಘಟಕದ ಗೌರವಾಧ್ಯಕ್ಷ ನಾಗಪ್ಪ ಈಡಿಗೇರ ಪ್ರಮುಖರಾದ ಎಂ. ಸಂದೀಪಗೌಡ, ಬಸವರಾಜ ಮರಕುಂಬಿ, ಸುರೇಶ ನಾಗನಕಲ್ ಹಾಗೂ ಉದ್ಯಮಿ ವೀರೇಶಪ್ಪ ಚಿನಿವಾಲ, ಹನುಮಂತಪ್ಪ ಸಿಂಗಾಪುರ, ಯಮನೂರಸಿಂಗ ರಜಪೂತ, ತಿಪ್ಪಣ್ಣ ಮೂಲಿಮನಿ, ಧನಂಜಯ ಇದ್ದರು.
ದೇವಸ್ಥಾನ ನಿರ್ಮಾಣಕ್ಕೆ ಸಹಕಾರ: ಮಾಜಿ ಸಚಿವ ನಾಗಪ್ಪ ಸಾಲೋಣಿ
‘ಗ್ರಾಮ ದೇವತೆ ದ್ಯಾವಮ್ಮ ದೇವಿ ದೇಗುಲ ನಿರ್ಮಾಣ ಕಾರ್ಯಕ್ಕೆ ಪಟ್ಟಣದ ಎಲ್ಲಾ ಸಮಾಜದವರಿಂದ ಹಾಗೂ ಇತರೆ ವರ್ಗದವರಿಂದ ದೇಣಿಗೆ ಹರಿದು ಬರುತ್ತಿದೆ’ ಎಂದು ಸಾಲೋಣಿ ನಾಗಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ₹2. 62 ಲಕ್ಷ ಗಂಗಾಮತ ಸಮಾಜದಿಂದ, ಗುಜರಾತ್-ರಾಜಸ್ಥಾನ ಸಮಾಜದವರಿಂದ ₹2. 51 ಲಕ್ಷ, ರಜಪೂತ ಸಮಾಜದಿಂದ ₹2. 1ಲಕ್ಷ, ಮಾತಂಗಿ ಸಮಾಜದಿಂದ ₹1. 11ಲಕ್ಷ, ಹಡಪದ-ಸವಿತಾ ಸಮಾಜದಿಂದ ₹1.11ಲಕ್ಷ, ಅಕ್ಕಿ ಗಿರಣಿ ಮಾಲೀಕರ ಸಂಘದಿಂದ ₹40ಲಕ್ಷ ಹಾಗೂ ಇತರ ರೈಸ್ಮಿಲ್ ಮಾಲೀಕರು ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಸಚಿವ ಶಿವರಾಜ ತಂಗಡಗಿ ₹50ಲಕ್ಷ, ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ₹4ಲಕ್ಷ, ಮಾಜಿ ಶಾಸಕ ಜಿ.ವೀರಪ್ಪ ಕೆಸರಟ್ಟಿ ₹2ಲಕ್ಷ, ಇತರ ಸಮಾಜಗಳು ದೇಣಿಗೆ ಸಂಗ್ರಹದಲ್ಲಿದ್ದು, ಅವರಿಂದಲೂ ದೇಣಿಗೆ ಬರುವುದು. ಸಿಂಧನೂರು, ಗಂಗಾವತಿ ನಗರಗಳ ಅನೇಕರಿಂದ ದೇಣಿಗೆ ಬರಲಿದೆ. ದೇವಾಲಯದ ಹಿಂಭಾಗದ ಕೋಟ್ಯಾಂತರ ಬೆಲೆ ಬಾಳುವ ಭೂಮಿಯನ್ನು ಉದ್ಯಮಿ ಎನ್. ಮೋಹನರಾವ್ ದೇಣಿಗೆಯಾಗಿ ನೀಡಿದ್ದಾರೆ’ ಎಂದು ಹೇಳಿದರು.
ಟ್ರಸ್ಟ್ ರಚನೆ: ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಪ್ರಮುಖರ ಸಭೆ ಕರೆದು ದೇವಸ್ಥಾನ ಟ್ರಸ್ಟ್ ರಚಿಸಲಾಗುವುದು. ಸುಮಾರು ₹4ಕೋಟಿ ವೆಚ್ಚದ ದೇವಾಲಯವನ್ನು ಕಲ್ಲಿನಲ್ಲಿಯೇ ನಿರ್ಮಿಸಲಾಗುವುದು. ಶಿರಾ ತಾಲ್ಲೂಕಿನ ತಾವರಕೆರೆಯಿಂದ ಕಲ್ಲುಗಳನ್ನು ತರಿಸಲಾಗಿದೆ. ಅನುಭವಿ ಶಿಲ್ಪಿಗಳು, ಕುಸುರಿ ಕಲಾಕಾರರಿಂದ ಕೆತ್ತನೆ ಕಾರ್ಯ ಪಟ್ಟಣದ ಕೆಜಿಪಿಎಲ್ ಕಾರ್ಖಾನೆ ಹಾಗೂ ದೇವಸ್ಥಾನದ ಆವರಣದಲ್ಲಿ ಭರದಿಂದ ನಡೆದಿದೆ. 2 ವರ್ಷದೊಳಗೆ ಭವ್ಯ ದೇಗುಲ ನಿರ್ಮಾಣವಾಗುವ ಸಂಭವವಿದೆ ಎಂದವರು ವಿವರಿಸಿದರು.
ಹಿಂದೆ ನಡೆದಿದ್ದ ಸಭೆಯಲ್ಲಿ ವಾಗ್ದಾನ ಮಾಡಿದವರು ದೇಣಿಗೆ ನೀಡಿದ್ದಾರೆ ಇತರರಿಂದಲೂ ದೇಣಿಗೆ ಹರಿದು ಬರುತ್ತಿದೆ. ಕೆಲ ಸ್ವಯಂ ಸೇವಕರು ನಿರ್ಮಾಣ ಕಾರ್ಯಕ್ಕೆ ನಮ್ಮೊಂದಿಗೆ ಕೈ ಜೋಡಿಸುತ್ತಿದ್ದಾರೆ. ಗ್ರಾಮ ದೇವತೆ ದ್ಯಾವಮ್ಮರ ಆಶೀರ್ವಾದದಿಂದ ಎಲ್ಲವೂ ಸುಸೂತ್ರವಾಗಿಯೇ ನಡೆದಿದ್ದು ಭವ್ಯ ದೇವಾಲಯ ನಿರ್ಮಾಣವಾಗಲಿದೆ.
- ಸಾಲೋಣಿ ನಾಗಪ್ಪ ಮಾಜಿ ಸಚಿವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.