ADVERTISEMENT

ಕೊಪ್ಪಳ | ಸಹಕಾರ ಕ್ಷೇತ್ರಕ್ಕೆ ಆತ್ಮಾವಲೋಕನದ ಕಾಲ: ಸಚಿವ ಎಚ್‌.ಕೆ. ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:40 IST
Last Updated 26 ಅಕ್ಟೋಬರ್ 2025, 7:40 IST
ಕೊಪ್ಪಳದಲ್ಲಿ ಶನಿವಾರ ನಡೆದ ಜಿಲ್ಲಾ ಸಹಕಾರ ಯೂನಿಯನ್‌ನ ರಜತ ಮಹೋತ್ಸವದ ಕಾರ್ಯಕ್ರಮವನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು. ಜನಪ್ರತಿನಿಧಿಗಳು ಹಾಗೂ ಗಣ್ಯರು ಜೊತೆಗಿದ್ದರು 
ಕೊಪ್ಪಳದಲ್ಲಿ ಶನಿವಾರ ನಡೆದ ಜಿಲ್ಲಾ ಸಹಕಾರ ಯೂನಿಯನ್‌ನ ರಜತ ಮಹೋತ್ಸವದ ಕಾರ್ಯಕ್ರಮವನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು. ಜನಪ್ರತಿನಿಧಿಗಳು ಹಾಗೂ ಗಣ್ಯರು ಜೊತೆಗಿದ್ದರು     

ಕೊಪ್ಪಳ: ’ರಾಜಕಾರಣಿಗಳ ಚುನಾವಣೆಯಂತೆ ಸಹಕಾರ ರಂಗದ ಚುನಾವಣೆಗಳಲ್ಲಿಯೂ ಹಣದ ಹೊಳೆ ಹರಿದು, ಬಲಾಢ್ಯರ ಕೈ ಮೇಲಾಗುತ್ತಿರುವುದರಿಂದ ಈ ರಂಗ ಕ್ಷೀಣಿಸುತ್ತಲೇ ಹೋಗುತ್ತದೆ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಕೆ. ಪಾಟೀಲ ಅಭಿಪ್ರಾಯ ಪಟ್ಟರು.

ಜಿಲ್ಲಾ ಸಹಕಾರ ಯೂನಿಯನ್‌ನ ಆರಂಭವಾಗಿ 25 ವರ್ಷಗಳಾದ ಹಿನ್ನಲೆಯಲ್ಲಿ ನಗರದಲ್ಲಿ ಶನಿವಾರ ಆರಂಭವಾದ   ರಜತ ಮಹೋತ್ಸವದ ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಎರಡೂವರೆ ದಶಕಗಳಲ್ಲಿ ಸಾಗಿ ಬಂದ ಹಾದಿಯನ್ನು ಅವಲೋಕಿಸಿ ಮುಂದಿನ ಹೆಜ್ಜೆಗಳನ್ನು ಇರಿಸಬೇಕಿದೆ. ಸಹಕಾರಿ ಚಳವಳಿ ಉಳಿಯಲು ಬದ್ಧತೆ ಬೇಕು. ಸಾಲ ಕೊಡುವವರು ಕೂಡ ಪಾಲು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಯಶಸ್ವಿ ಸಹಕಾರಿ ಮಾತ್ರ ಮುಂದೆ ಯಾವುದೇ ಕ್ಷೇತ್ರಕ್ಕೆ ಹೋದರೂ ಯಶಸ್ವಿ ನಾಯಕನಾಗಿ ಹೊರಹೊಮ್ಮುತ್ತಾನೆ’ ಎಂದು ಹೇಳಿದರು.

‘ಸಹಕಾರ ಕ್ಷೇತ್ರದ ಬಲವರ್ಧನೆಗೆ ಅನೇಕ ಮಹನೀಯರು ದುಡಿದು ರಾಜಕಾರಣಕ್ಕೆ ಬಂದು ಅಲ್ಲಿಯೂ ಯಶಸ್ಸು ಕಂಡಿದ್ದಾರೆ. ಸಾರ್ವಜನಿಕರ ಸೇವೆ ಮಾಡಲು ರಾಜಕಾರಣದಲ್ಲಿ ಮೊದಲು ಅವಕಾಶ ಸಿಗುತ್ತಿತ್ತು. ಈಗ ಹಿಂದಿನ ಪರಿಸ್ಥಿತಿಯಿಲ್ಲ. ರಾಜಕಾರಣದಲ್ಲಿ ಪ್ರಜಾಪ್ರಭುತ್ವದ ಪಾಠವನ್ನು ಸಹಕಾರಿ ಧುರೀಣರು ಮಾತ್ರ ಕಲಿಸುತ್ತಿದ್ದಾರೆ. ಪ್ರಾಮಾಣಿಕ  ಸಹಕಾರಿಗಳಿಂದ ಮಾತ್ರ ಪ್ರಾಮಾಣಿಕ ರಾಜಕಾರಣ ನಿರೀಕ್ಷಿಸಲು ಸಾಧ್ಯ‘ ಎಂದು ಹೇಳಿದರು.

ADVERTISEMENT

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ ‘ಎಲ್ಲರಿಗಾಗಿ ಒಗ್ಗೂಡುವುದೇ ಸಹಕಾರ ಕ್ಷೇತ್ರದ ಉದ್ದೇಶವಾಗಿದೆ. ದೇಶ ಪ್ರಗತಿಯಾಗಲು ಸಹಕಾರಿ ಮನೋಭಾವ ಬೇಕು ಎಂದು ಮಹಾತ್ಮ ಗಾಂಧೀಜಿ ಹೇಳಿದ ಮಾತು ಈ ಕ್ಷೇತ್ರದ ಅಭಿವೃದ್ಧಿಗೆ ಮೂಲ ತತ್ವವಾಗಿದೆ. ಮಹಿಳೆಯರು ಹಾಗೂ ರೈತರು ಅಭಿವೃದ್ಧಿ ಹೊಂದಲು ಸಹಕಾರ ರಂಗದ ಬೆಂಬಲ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಮುನಿರಾಬಾದ್‌ ಕಾಡಾ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌, ಆರ್‌ಕೆಡಿಸಿಸಿ ಅಧ್ಯಕ್ಷ ವಿಶ್ವನಾಥ ಪಾಟೀಲ, ರಾಯಚೂರು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ವಿಜಯಕುಮಾರ ಪಾಟೀಲ, ಬಳ್ಳಾರಿ ಕೆಎಂಎಫ್‌ ಉಪಾಧ್ಯಕ್ಷ ಎನ್‌. ಸತ್ಯನಾರಾಯಣ, ಪ್ರಮುಖರಾದ ಸಂಜಯ್ ಪಾಟೀಲ, ಅಮರೇಶ ಪಾಟೀಲ, ಸುರೇಶರಡ್ಡಿ ಮಾದಿನೂರು, ಶ್ರೀಧರ ಕೆಸರಹಟ್ಟಿ, ತೋಟಪ್ಪ ಕಾಮನೂರು, ಎಚ್‌.ಆರ್‌. ರಾಘವೇಂದ್ರ, ಎನ್‌. ಗಂಗಣ್ಣ, ರಾಜಶೇಖರ ಆಡೂರು ಹಾಗೂ ಉಪವಿಭಾಗಾಧಿಕಾರಿ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ 
ಜಿಲ್ಲೆಯಲ್ಲಿ ಸಹಕಾರ ವ್ಯವಸ್ಥೆ ಬಲಿಷ್ಠವಾಗಿರಲಿಲ್ಲ. ಎಲ್ಲ ಹಿರಿಯರ ಶ್ರಮದಿಂದಾಗಿ ಈಗ ಈ ಕ್ಷೇತ್ರದ ದೊಡ್ಡಪಟ್ಟದಲ್ಲಿ ಬೆಳೆದು ನಿಂತು 25 ವರ್ಷಗಳನ್ನು ಪೂರೈಸಿದೆ.
ಶೇಖರಗೌಡ ಮಾಲಿಪಾಟೀಲ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.