ಗಂಗಾವತಿ: ‘ಕ್ಷಯರೋಗಿಗಳು ಕೊರೊನಾ ಲಕ್ಷಣಗಳು ಕಂಡುಬಂದಾಗ ಮುಜುಗರವಿಲ್ಲದೆ ಪರೀಕ್ಷೆಗೆ ಒಳಪಡಬೇಕು’ ಎಂದು ಸರ್ಕಾರಿ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಕ್ಷಯರೋಗ ವಿಭಾಗದಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಕ್ಷಯರೋಗಿಗಳಿಗೆ ನಡೆದ ಸಮುದಾಯ ಸಭೆಯಲ್ಲಿ ಮಾತನಾಡಿದರು.
‘ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸಬೇಕು. ಸಹವ್ಯಾಧಿ ಸೋಂಕುಗಳ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುತ್ತ ಮಾತ್ರೆ ಸೇವಿಸುವುದರಿಂದ ಕ್ಷಯ ರೋಗವನ್ನು ಸಂಪೂರ್ಣವಾಗಿ ತೊಲಗಿಸಬಹುದು’ ಎಂದರು.
ಕ್ಷಯರೋಗ ಪರಿವೀಕ್ಷಕ ಮಲ್ಲಿಕಾರ್ಜುನ ಅವರು ಮಾತನಾಡಿ,‘ಎರಡು ವಾರಕ್ಕೂ ಮೇಲ್ಪಟ್ಟು ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಹಸಿವಾಗದಿರುವುದು, ದೇಹದ ತೂಕ ಕಡಿಮೆಯಾಗುವುದು, ಕತ್ತುಗಳಲ್ಲಿ ಗಡ್ಡೆ ಆಗಿರುವ ಲಕ್ಷಣಗಳು ಕಂಡು ಬಂದಾಗ ಹಾಗೂ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಈ ಲಕ್ಷಣಗಳುಳ್ಳ ವ್ಯಕ್ತಿಗಳು ಗೋಚರಿಸಿದಾಗ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಿಕೊಡಬೇಕು’ ಎಂದು ಮನವಿ ಮಾಡಿದರು,
ಆರೋಗ್ಯ ಸಿಬ್ಬಂದಿ ಹುಸೇನ್ ಬಾಷಾ, ದಾನನಗೌಡ, ರಾಘವೇಂದ್ರ ಜೋಶಿ, ಖಾಸಿಂಬಿ, ಹನುಮಂತಪ್ಪ ಹಾಗೂ ಅಂಗನವಾಡಿ ಶಿಕ್ಷಕಿ ಮಮ್ತಾಜ್ ಬೇಗಂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.