ADVERTISEMENT

‘ಕೋವಿಡ್‌ ತಡೆಗೆ ಲಸಿಕೆ ರಾಮಬಾಣ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:53 IST
Last Updated 4 ಜನವರಿ 2022, 6:53 IST
ಗಂಗಾವತಿ ನಗರದ ಸರೋಜಮ್ಮ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು
ಗಂಗಾವತಿ ನಗರದ ಸರೋಜಮ್ಮ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು   

ಗಂಗಾವತಿ: ‘ದೇಶದ ಎಲ್ಲ ರಾಜ್ಯಗಳಲ್ಲಿ ಒಂದೇ ದಿನ ಪ್ರೌಢ ಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ’ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.

ಇಲ್ಲಿನ ಎಂಎನ್ಎಂ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದರು.

ದೇಶ ಮತ್ತು ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡಲು ಹಾಗೂ ಮಕ್ಕಳ ಜೀವ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ಲಸಿಕೆ ನೀಡುವ ನಿರ್ಧಾರ ಕೈಗೊಂಡಿವೆ. 2 ಕೋವಿಡ್ ಅಲೆಗಳಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಇಂಥ ದುರ್ಘಟನೆಗಳು ನಡೆಯದಂತೆ ತಡೆಗಟ್ಟಲು, ಲಸಿಕೆ ಪಡೆಯುವುದು ಒಂದೇ ಮಾರ್ಗ ಎಂದು ಹೇಳಿದರು.

ADVERTISEMENT

ಒಂದು ವೇಳೆ ವಿದ್ಯಾರ್ಥಿಗಳು ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಲ್ಲಿ, ವೈದ್ಯರ ಸಲಹೆ ಮೇರೆಗೆ ಲಸಿಕೆ ಹಾಕಿಸಿಕೊಳ್ಳುವುದನ್ನು ಮುಂದೂಡಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ವೇಳೆಯಲ್ಲಿ ಕೊಟ್ಟುರೇಶ್ವರ ಸ್ವಾಮೀಜಿ, ತಾ.ಪಂ ಇಒ ಡಾ.ಡಿ ಮೋಹನ್ ಮಾತನಾಡಿದರು.

ನಗರದಲ್ಲಿ ವೈದ್ಯಕೀಯ, ಆಶಾ ಕಾರ್ಯಕರ್ತೆರು, ಪ್ರಾಥಮಿಕ ಚಿಕಿತ್ಸಾ ಕೇಂದ್ರ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ 4 ತಂಡಗಳನ್ನು ರಚಿಸಿ, ಸರೋಜಮ್ಮ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು, ಜೆ.ಎಸ್.ಎಸ್ ಪ್ರೌಢ ಶಾಲೆ, ಎಂಎನ್ಎಂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು, ವಿದ್ಯಾನಗರದ ತೆಲುಗು ಪ್ರೌಢಶಾಲೆಗಳಿಗೆ ಕಳುಹಿಸಿ, ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕೆಲಸ ಮಾಡಲಾಯಿತು.

ಎಲ್ಲೆಲ್ಲಿ: ತಾಲ್ಲೂಕಿನ ಆನೆಗೊಂದಿ ಪ್ರೌಢಶಾಲೆ, ವಡ್ಡರಹಟ್ಟಿ ಪ್ರೌಢಶಾಲೆ, ಹೇರೂರು ಪ್ರೌಢಶಾಲೆ, ಬಸಾಪಟ್ಟಣ, ವೆಂಕಟಗಿರಿ, ಆರ್ಹಾಳ ಪ್ರೌಢ ಶಾಲೆಗಳಲ್ಲಿ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಬಿಇಒ: ಇಲ್ಲಿನ ಎಂಎನ್ಎಂ ಬಾಲಕಿಯರ ಪ್ರೌಢಶಾಲೆಗೆ ಬಿಇಓ ಸೋಮಶೇಖರಗೌಡ ಭೇಟಿ ನೀಡಿ,‌ ಲಸಿಕೆ ಪಡೆದರೆ ಆಗುವ ಲಾಭಗಳು ಕುರಿತು ವಿದ್ಯಾರ್ಥಿನಿಯರಿಗೆ ಸಂಕ್ಷಿಪ್ತ ಮಾಹಿತಿ ನೀಡಿ, ಲಸಿಕೆ ಪಡೆಯುವ ಕುರಿತು ಧೈರ್ಯ ತುಂಬಿದರು.

ಗ್ರೇಡ್-2 ತಹಶೀಲ್ದಾರ್ ವಿ.ಎಚ್.ಹೊರಪೇಟಿ, ಕೊಟ್ಟುರೇಶ್ವರ ಸ್ವಾಮೀಜಿ, ಶರಣೆಗೌಡ, ಜಿಲ್ಲಾ ಸರ್ಜನ್ ಡಾ.ಈಶ್ವರ ಸವಡಿ, ಡಾ.ರಾಧಿಕಾ, ನಗರಸಭೆ ಸದಸ್ಯ ವಾಸುದೇವ ನವಲಿ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.