ADVERTISEMENT

ಭರದಿಂದ ಸಾಗಿದ ಕ್ರಸ್ಟ್‌ಗೇಟ್‌ ತಯಾರಿಕಾ ಕೆಲಸ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 16:21 IST
Last Updated 14 ಆಗಸ್ಟ್ 2024, 16:21 IST
ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಬುಧವಾರ ಸುತ್ತೂರಿನ ದೇಶಿಕೇಂದ್ರ ಸ್ವಾಮೀಜಿ ಭೇಟಿ ನೀಡಿದರು
ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಬುಧವಾರ ಸುತ್ತೂರಿನ ದೇಶಿಕೇಂದ್ರ ಸ್ವಾಮೀಜಿ ಭೇಟಿ ನೀಡಿದರು   

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಗೇಟ್ ಅಳವಡಿಕೆ ಕಾರ್ಯಕ್ಕೆ ಗೇಟ್‌ಗಳನ್ನು ತಯಾರಿಸುವ ಕಾರ್ಯ ಚುರುಕಾಗಿ ನಡೆದಿದ್ದು ಎಲ್ಲ ಮೂರು ಕೇಂದ್ರಗಳಲ್ಲಿ ಗೇಟ್‌ನ ಭಾಗಗಳ ತಯಾರಿಕೆ ಅಂತಿಮ ಹಂತ ತಲುಪಿದೆ.

ಇದರ ನಡುವೆ ವಿವಿಧ ಪಕ್ಷಗಳ ನಾಯಕರು ಹಾಗೂ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪರಿಹಾರಕ್ಕೆ ಆಗ್ರಹ: ಜೆಡಿಎಸ್‌ ನಾಯಕರು ಕೂಡ ಬುಧವಾರ ಗೇಟ್‌ ಪರಿಶೀಲನೆ ನಡೆಸಿದರು.

ADVERTISEMENT

‘ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಿ ಈ ಕ್ಷಣದಿಂದಲೇ ರೈತರಿಗೆ ಪರಿಹಾರ ವಿತರಣೆ ಹಾಗೂ ಕ್ರಸ್ಟ್ ಗೇಟ್ ದುರಸ್ತಿಯನ್ನು ಕೈಗೊಳ್ಳಬೇಕು’ ಎಂದು ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರೆ. 

ಮಾಜಿ ಸಚಿವ ವೆಂಕಟರಾವ್ ನಾಡಗೌಡ್ರು, ಶಾಸಕಿ ಕೆರೆಮ್ಮ ನಾಯಕ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌, ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ, ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ರಾಜು ನಾಯಕ್ ಜಲಾಶಯದಲ್ಲಿ ಪರಿಶೀಲನೆ ನಡೆಸಿದರು.

‘ರಾಜ್ಯ ಸರ್ಕಾರ ಅಣೆಕಟ್ಟು ನಿರ್ವಹಣೆಗಾಗಿನ ಸಭೆಯನ್ನು ಬೆಂಗಳೂರಿನಲ್ಲಿ ಮಾಡಿದ್ದು ನೈತಿಕವಾಗಿ ತಪ್ಪು. ಮಳೆಗಾಲದಲ್ಲಿ ಅಣೆಕಟ್ಟನ್ನು ಸರಿಯಾಗಿ ಪರಿಶೀಲನೆ ಮಾಡದಿರುವುದು ಅಪರಾಧ. ಅಣೆಕಟ್ಟು ನಿರ್ವಹಣೆ ರಾಜ್ಯ ಸರ್ಕಾರದ ಜವಾಬ್ದಾರಿ. ಇದರಲ್ಲಿ ಕೇಂದ್ರ ಸರಕಾರವನ್ನು ದೋಷಿಸಿ ಪ್ರಯೋಜನವಿಲ್ಲ’ ಎಂದು ವೆಂಕಟರಾವ್ ನಾಡಗೌಡ್ರ ಹೇಳಿದರು.

‘ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೇಕು’ ಎಂದು ಚಂದ್ರಶೇಖರ್‌ ಆಗ್ರಹಿಸಿದರು.

ಮುಖಂಡರಾದ ವೀರೇಶಗೌಡ ಚಿಕ್ಕಬಗನಾಳ, ಮೂರ್ತೆಪ್ಪ ಗಿಣಗೇರಿ, ಯಮನಪ್ಪ ಕಟಿಗಿ, ರಮೇಶ ಕುಣಕೇರಿ, ಶ್ರೀನಿವಾಸ ಪೂಜಾರ, ಸಿದ್ದನಗೌಡ ಚಿಕ್ ಬಗನಾಳ, ಶರಣಪ್ಪ ಜಡಿ ಇದ್ದರು.

ತುಂಗಭದ್ರಾ ಜಲಾಶಯಕ್ಕೆ ಜೆಡಿಎಸ್‌ ಮುಖಂಡರು ಬುಧವಾರ ಭೇಟಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.