ಕೊಪ್ಪಳ: ವನ್ಯ ಜಗತ್ತಿನ ಹಲವು ಅಚ್ಚರಿಗಳು, ಕಾಡಿನ ಜತೆ ಮಾನವ ಹಾಗೂ ಪ್ರಾಣಿಗಳ ನಂಟಿನ ಕಥೆಯ ಹಂದರವುಳ್ಳ ಕರ್ನಾಟಕ ರತ್ನ ದಿ.ಪುನೀತ್ ರಾಜ್ಕುಮಾರ್ ಅಭಿನಯದ ಗಂಧದಗುಡಿ ಡಾಕ್ಕುಡ್ರಾಮಾವನ್ನು (ಸಾಕ್ಷ್ಯದೃಶ್ಯನಾಟಕ) ಇಲ್ಲಿನ ಸರ್ಕಾರಿ ಬಾಲಕಿಯರ ಹಾಗೂ ಬಾಲಕರ ಬಾಲಮಂದಿರದ ಮಕ್ಕಳು ಜಿಲ್ಲಾ ಪಂಚಾಯಿಸಿ ಸಿಇಒ ಫೌಜಿಯಾ ತರನ್ನುಮ್ ಜೊತೆ ವೀಕ್ಷಿಸಿದರು.
ನಗರದ ಶಿವ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ ಮಕ್ಕಳು ಸಂಭ್ರಮಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಮಕ್ಕಳ ದಿನಾಚರಣೆಯ ಅಂಗವಾಗಿ ಚಿತ್ರ ವೀಕ್ಷಣೆಗೆ ಏರ್ಪಾಡು ಮಾಡಿದ್ದರು.
ನಾಗರಹೊಳೆ ಅಭಯಾರಣ್ಯ, ರಾಜಕುಮಾರ್ ಹುಟ್ಟೂರು ಗಾಜನೂರು, ಬಿಆರ್ಟಿ ಟೈಗರ್ ರಿಸರ್ವ್, ಸಕ್ಕರೆ ಬೈಲು, ಕರಾವಳಿಯ ನೇತ್ರಾಣಿ, ಜೋಗ ಜಲಪಾತ, ಆಗುಂಬೆ, ಉತ್ತರ ಕರ್ನಾಟಕದ ವಿಜಯನಗರ, ತುಂಗಭದ್ರಾ , ಕಾಳಿ ನದಿಗಳು ಸೇರಿದಂತೆ ಕರ್ನಾಟಕದ ಅರಣ್ಯ ವೈವಿಧ್ಯತೆಯ ದರ್ಶನವನ್ನು ಮಕ್ಕಳು ಸಿನಿಮಾದಲ್ಲಿ ನೋಡಿ ಖುಷಿಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಚಿತ್ರಮಂದಿರದ ಮಾಲೀಕರಾದ ವಿರೇಶ ಮಹಾಂತಯ್ಯನಮಠ, ಶಿವಮೂರ್ತಯ್ಯ ಮಹಾಂತಯ್ಯನಮಠ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.