ಗಂಗಾವತಿ: ನಗರದ ಜಾಮೀಯಾ ಮಸೀದಿ ಬಳಿ ಮಾತ್ರ ಪೊಲೀಸರು ಬ್ಯಾರಿಕೇಡ್, ಕಟ್ಟಿಗೆ ಕಂಬ ಅಳವಡಿಸಿದ್ದು, ದೇವಸ್ಥಾನಗಳ ಬಳಿ ರಕ್ಷಣಾ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ ಸದಸ್ಯ ಶ್ರೀಕಾಂತ ಹೊಸಕೇರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈದ್ ಮಿಲಾದ್ ಮತ್ತು ಗಣೇಶ ಚತುರ್ಥಿ ಆಚರಣೆ ಕುರಿತು ಈಚೆಗೆ ಶಾಂತಿಸಭೆ ನಡೆಸಿದ ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತ, ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬವನ್ನು ಎಲ್ಲ ಸಮುದಾಯದ ಜನರು ಸೌಹಾರ್ದತೆಯಿಂದ ಆಚರಿಸುವಂತೆ ತಿಳಿಸಿದ್ದು ಸ್ವಾಗತಾರ್ಹ. ಈ ಹಬ್ಬದ ಸಂದರ್ಭದಲ್ಲಿ ಮೆರವಣಿಗೆಗಳು ನಡೆಯಲಿವೆ. ಆದರೆ ಮಸೀದಿ ಬಳಿ ಮಾತ್ರ ಅಗತ್ಯ ಬಂದೋಬಸ್ತ್, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಗಣೇಶ ಮೂರ್ತಿ ಮೆರವಣಿಗೆ ಮಸೀದಿ ಮುಂದೆ ಹಾದು ಹೋದರೆ, ಈದ್ ಮಿಲಾದ್ ಹಬ್ಬದಲ್ಲಿ ಮುಸ್ಲಿಂ ಸಮುದಾಯದ ಮೆರೆವಣಿಗೆ ಸಹ ಹಿಂದೂ ದೇವಸ್ಥಾನಗಳ ಮುಂದೆ ಹಾದು ಹೋಗುತ್ತದೆ. ಹೀಗಿದ್ದಾಗ ಹಿಂದೂ ದೇವಸ್ಥಾನಗಳ ಬಳಿ ಬ್ಯಾರಿಕೇಡ್ ಅಳವಡಿಕೆ, ಕಟ್ಟಿಗೆ ಕಂಬಗಳನ್ನು ನಿರ್ಮಿಸಿ ರಕ್ಷಣಾ ಕ್ರಮಗಳನ್ನು ಏಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮಸೀದಿ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡುವುದರಿಂದ ಸಾರ್ವಜನಿಕರಲ್ಲಿ ಭಯ, ಗೊಂದಲ ಸೃಷ್ಟಿಯಾಗುತ್ತದೆ. ಬ್ಯಾರಿಕೇಡ್ ಅಳವಡಿಕೆಯನ್ನು ಮಸೀದಿ ಮತ್ತು ಹಿಂದೂ ದೇವಸ್ಥಾನಗಳ ಬಳಿಯೂ ಮಾಡಬೇಕು. ಇಲ್ಲವಾದರೆ ಎರಡು ಕೈಬಿಡಬೇಕು. ಸುಮ್ಮನೆ ಎರಡು ಸಮುದಾಯಗಳ ನಡುವೆ ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.