ಕೊಪ್ಪಳ: ಇಲ್ಲಿನ ವಲಯದ ಅಬಕಾರಿ ನಿರೀಕ್ಷಕ ರಮೇಶ್ ಅಗಡಿ ಮದ್ಯ ಮಾರಾಟಗಾರರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ವೈನ್ ಮರ್ಚಂಟ್ಸ್ ಸಂಸ್ಥೆಗಳ ಒಕ್ಕೂಟದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ ಹಾಗೂ ಪದಾಧಿಕಾರಿಗಳು ಮಾತನಾಡಿ ‘ರಮೇಶ್ ಅಗಡಿ ಅತಿಮಾನವ ಲಕ್ಷಣಗಳನ್ನು ಹೊಂದಿದ್ದಾರೆ. ಗೋಕಾಕ ಮತ್ತು ದಾವಣಗೆರೆಯಲ್ಲಿ ಕೆಲಸ ಮಾಡುವಾಗಲೂ ಹಣಕ್ಕಾಗಿ ಮದ್ಯ ಮಾರಾಟಗಾರರಿಗೆ ತೊಂದರೆ ಕೊಟ್ಟಿದ್ದರು. ಇಲ್ಲಿಯೂ ಅದನ್ನು ಮುಂದುವರಿಸಿದ್ದಾರೆ. ಸರ್ಕಾರಕ್ಕೆ ಸಾವಿರಾರು ಕೋಟಿ ವರಮಾನ ತಂದುಕೊಡುವ ಸನ್ನದುದಾರರಿಗೆ ಕಿರುಕುಳು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
ಅಧ್ಯಕ್ಷ ಎಸ್. ಗುರುಸ್ವಾಮಿ ಮಾತನಾಡಿ ‘ಯಾರು ಅವರ ಪರವಾಗಿ ಮಾತನಾಡುತ್ತಾರೊ ಅವರೊಂದಿಗೆ ಸರಿಯಾಗಿ ಇರುತ್ತಾರೆ. ಇದೇ ರೀತಿಯ ತಪ್ಪು ಮುಂದುವರಿದರೆ ಇಲಾಖೆಯ ಮುಖ್ಯ ಕಚೇರಿ ಎದುರು ಅಮರಾಂತ ಉಪವಾಸ ಮಾಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.