ADVERTISEMENT

ಸಿ.ಡಿ, ಇ.ಡಿಯಿಂದ ತಪ್ಪಿಸಿಕೊಳ್ಳಬಹುದು, ದೇವನಿಂದ ಅಸಾಧ್ಯ: ಶಾಸಕ ದೊಡ್ಡನಗೌಡ

ಕುಷ್ಟಗಿಯಲ್ಲಿ ಕನ್ನಡದಲ್ಲಿ ಕುರ್‌ಆನ್‌ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 5:07 IST
Last Updated 24 ಆಗಸ್ಟ್ 2025, 5:07 IST
ಕುಷ್ಟಗಿಯಲ್ಲಿ ಕನ್ನಡದಲ್ಲಿ ಕುರ್‌ಆನ್‌ ಪ್ರವಚನ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು
ಕುಷ್ಟಗಿಯಲ್ಲಿ ಕನ್ನಡದಲ್ಲಿ ಕುರ್‌ಆನ್‌ ಪ್ರವಚನ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು   

ಕುಷ್ಟಗಿ: ಕಾನೂನಿನ ಕಣ್ಣಿಗೆ ಮಣ್ಣೆರಚಿ, ಸಿಡಿ, ಇ.ಡಿಯಿಂದ ನಮ್ಮ ಅಪರಾಧ ಕೃತ್ಯಗಳನ್ನು ಮುಚ್ಚಿಕೊಳ್ಳಲು ಸಾಧ್ಯ ಆದರೆ ದೇವನಿಂದ ತಪ್ಪುಗಳನ್ನು ಬಚ್ಚಿಟ್ಟುಕೊಳ್ಳಲು ಅಸಾಧ್ಯ. ಹಾಗಾಗಿ ದೇವ ಭಯ ಇದ್ದರೆ ಮಾತ್ರ ಆದರ್ಶ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರವಚನಕಾರ ಲಾಲ್‌ ಹುಸೇನ್‌ ಕಂದಗಲ್‌ ಹೇಳಿದರು.

ಪಟ್ಟಣದಲ್ಲಿ ಮುಸ್ಲಿಂ ಯುವ ಸಮಿತಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್‌ ವತಿಯಿಂದ ನಡೆಯುತ್ತಿರುವ 'ಕನ್ನಡದಲ್ಲಿ ಕುರ್‌ಆನ್‌' ಪ್ರವಚನದ ಎರಡನೇ ದಿನದ 'ಯಶಸ್ವಿ ಜೀವನ' ವಿಷಯವಾಗಿ ಮಾತನಾಡಿದ ಅವರು, ದೇವ ಭಯ ಇಟ್ಟುಕೊಂಡವರು ಜೀವನದಲ್ಲಿ ಉತ್ತಮ ಗುಣ ಸಂಪಾದಿಸಿ ತಪ್ಪುಗಳನ್ನು ಮಾಡುವುದರಿಂದ ಮುಕ್ತರಾಗುತ್ತಾರೆ. ಧರ್ಮದ ಮುಖವಾಡ ಸಮಾಜದ ಮುಂದೆ ಅಲ್ಲದಿದ್ದರೂ ದೇವರ ಮುಂದೆ ಮಾತ್ರ ಕಳಚಿಕೊಳ್ಳುತ್ತದೆ. ಯಾವುದಕ್ಕೂ ಹೆದರದಿದ್ದರೂ ಆತ್ಮಸಾಕ್ಷಿಗೆ ಹೆದರಿ ಬದುಕಬೇಕು ಎಂಬುದನ್ನು ಜಗತ್ತಿನ ಕುರ್‌ಆನ್‌ ಸೇರಿದಂತೆ ಎಲ್ಲ ಧರ್ಮಗಳ ಸಂದೇಶದ ಸಾರವೂ ಆಗಿದೆ ಎಂದರು.

ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಮನುಷ್ನ ಸ್ವಾರ್ಥಪರ ಚಿಂತನೆಗಳಿಂದ ಕೆಟ್ಟುಹೋಗುತ್ತಿದ್ದಾನೆ, ವಿಕೃತಿ ವಿಜೃಂಭಿಸುತ್ತಿದೆ. ಬೇರೆಯವರನ್ನು ಕೊಲ್ಲಿಯಾದರೂ ತಾನು ಬದುಕಬೇಕೆಂಬ ಹಪಾಹಪಿ ಹೆಚ್ಚುತ್ತಿದೆ. ಇನ್ನೊಬ್ಬರ ಕಷ್ಟಕ್ಕೆ ನಮ್ಮ ಹೃದಯ ಮಿಡಿದರೆ, ಬೇರೆಯವರ ಪ್ರಸನ್ನಚಿತ್ತ ಮನಸ್ಸಿನಿಂದ ಮುಗುಳ್ನಗೆಗೆ ಕಾರಣರಾದರೆ ದೇವರ ಸಂಪ್ರೀತಿ ಪಡೆಯಲು ಸಾಧ್ಯ. ಇಂಥ ಉದಾತ್ತ ಚಿಂತನೆಗಳಿಂದ ನಮ್ಮ ಬದುಕು ಸಾರ್ಥಕವಾಗುತ್ತದೆ, ಆತ್ಮ ಸಂಸ್ಕಾರಕ್ಕೆ ಮುನ್ನುಡಿ ಬರೆಯುತ್ತ ಹೋಗುವುದು ಜೀವನದ ಯಶಸ್ವಿ ಸೂತ್ರವೂ ಹೌದು ಎಂದು ಹೇಳಿದರು.

ADVERTISEMENT

ಕೋಮು ಸಂಸ್ಕೃತಿ ಅಪಾಯಗಳನ್ನು ಪ್ರಸ್ತಾಪಿಸಿದ ಅವರು, ಅಖಂಡ ಭಾರತದಲ್ಲಿ ಹಿಂದು, ಮುಸ್ಲಿಂ, ಸ್ಪರ್ಶರು, ಅಸ್ಪೃಶ್ಯರು ಹೀಗೆ ಎಲ್ಲ ಜಾತಿಯವರೂ ಸೇರಿ ಸ್ವಾತಂತ್ರ್ಯಕ್ಕೆ ಹೋರಾಡಿದ್ದೆವು, ಆದರೆ ಕೋಮುವಾದದ ನೆಲೆಗಟ್ಟಿನಲ್ಲಿ ಬ್ರೀಟೀಷರ ವಿರುದ್ಧದ ಹೋರಾಡಿದಕ್ಕಿಂತಲೂ ಹೆಚ್ಚು ಸಮಯವನ್ನು ಕೋಮು ದಳ್ಳುರಿಗಾಗಿ ಬಳಸಿಕೊಂಡಿದ್ದೇವೆ.. ಎಲ್ಲ ಅಪರಾಧಗಳನ್ನೂ ಮಾಡಿದ ವ್ಯಕ್ತಿಗಳೇ ಇಂದು ನಮ್ಮ ನಾಯಕರಾಗುತ್ತಿದ್ದಾರೆ.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಜಾತಿ ರಹಿತವಾಗಿದ್ದರೆ ಅದು ಸುಸಂಸ್ಕೃತ ಸಮಾಜದ ಲಕ್ಷಣ ಎನಿಸಿಕೊಳ್ಳುತ್ತದೆ, ಜಾತಿ ನಮ್ಮ ಮನೆಯ ಒಳಗೆ ಮಾತ್ರ ಇರಬೇಕು. ಆದರೆ ಈಗ ತೋರಿಕೆಗೆ ಮಾತ್ರ ಜಾತ್ಯತೀತ ಮುಖವಾಡ ಧರಿಸುತ್ತಿದ್ದೇವೆ, ಸಂಶಯ, ಅವಿಶ್ವಾಸ, ಅಪನಂಬಿಕೆಗಳಿಂದ ಸಮಾಜ ಕಲುಷಿತಗೊಳ್ಳುತ್ತಿದೆ. ರಾಜಕೀಯ ಕ್ಷೇತ್ರಕ್ಕೆ ಕ್ರಿಮಿನಲ್‌ ಹಿನ್ನೆಲೆಯುಳ್ಳ ವ್ಯಕ್ತಿಗಳ ಪ್ರವೇಶವಾಗುತ್ತಿದೆ. ಅಂಥ ವಿಷ ವರ್ತುಲದಿಂದ ಜನರನ್ನು ಸಮಾಜಮುಖಿ ಚಿಂತನೆಗಳತ್ತ ಕರೆದೊಯ್ಯಲು ಇಂಥ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತವೆ ಎಂದರು.

ಪದವಿ ಕಾಲೇಜಿನ ಪ್ರಾಚಾರ್ಯ ಎಸ್‌.ವಿ.ಡಾಣಿ, ದೊಡ್ಡಬಸವನಗೌಡ ಬಯ್ಯಾಪುರ ಇತರರು ಮಾತನಾಡಿದರು. ಫಾದರ್‌ ಜಾನ್‌ ಪೀಟರ್‌, ಶಿವಸಂಗಪ್ ಬಿಜಕಲ್, ಲಂಕೆಪ್ಪ ವಾಲಿಕಾರ, ಮೈನುದ್ದೀನ್‌ ಮುಲ್ಲಾ, ಅಮೀನುದ್ದೀನ್‌ ಮುಲ್ಲಾ, ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಅಬ್ದುಲ್‌ ನಯೀಂ ಇತರರು ಇದ್ದರು. ಶಿಕ್ಷಕ ನಟರಾಜ ಸೋನಾರ ನಿರೂಪಿಸಿದರು. ಶಾಮೀದಲಿ ಮದಗಾರ ಸ್ವಾಗತಿಸಿದರು.

ಅಧಿಕಾರಸ್ಥರ ಪದಚ್ಯುತಿ ಬಿಲ್‌; ಸಮರ್ಥನೆ

ಸಂಸತ್ತಿನಲ್ಲಿ ಇತ್ತೀಚೆಗೆ ಅನುಮೋದನೆಗೊಂಡ ಅಧಿಕಾರದಲ್ಲಿರುವ ಪ್ರಧಾನಮಂತ್ರಿಯಿಂದ ಹಿಡಿದು ಯಾರೇ ಚುನಾಯಿತ ಪ್ರತಿನಿಧಿ ಜೈಲು ಶಿಕ್ಷೆಗೆ ಒಳಗಾಗಿದ್ದರೆ ಅಂಥವರ ಅಧಿಕಾರ ಪದಚ್ಯುತಿಗೊಳಿಸುವ ವಿಧೇಯಕವನ್ನು ಪ್ರವಚನಕಾರ ಲಾಲ್‌ಹುಸೇನ್‌ ಕಂದಗಲ್‌ ಸಮರ್ಥಿಸಿಕೊಂಡರು.

ದೇಶದ ಜನ ಅಧಿಕಾರಸ್ಥರಿಂದ ಪ್ರಾಮಾಣಿಕತೆಯನ್ನು ಬಯಸುತ್ತಿದ್ದಾರೆ. ಆದರೆ ಅಪ್ರಮಾಣಿಕ ಪ್ರತಿನಿಧಿಗಳಿಗೆ ರಿಯಾಯಿತಿ ಏಕೆ? ಎಂದು ಪ್ರಶ್ನಿಸಿದ ಅವರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.