ADVERTISEMENT

ತವರಿನ ಒಡನಾಟದ ಫುಳಕ

ಸಾಹಿತ್ಯ ಬಳಗ ಕಂಡು ಖುಷಿಪಟ್ಟ ಪಂಚಾಕ್ಷರಿ ಹಿರೇಮಠ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:02 IST
Last Updated 23 ಜೂನ್ 2022, 2:02 IST
ಕೊಪ್ಪಳಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಾಹಿತಿ ಪಂಚಾಕ್ಷರಿ ಹಿರೇಮಠ ಅವರನ್ನು ಆತ್ಮೀಯರು, ಶಿಷ್ಯಂದಿರು ಸನ್ಮಾನಿಸಿದರು
ಕೊಪ್ಪಳಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಾಹಿತಿ ಪಂಚಾಕ್ಷರಿ ಹಿರೇಮಠ ಅವರನ್ನು ಆತ್ಮೀಯರು, ಶಿಷ್ಯಂದಿರು ಸನ್ಮಾನಿಸಿದರು   

ಕೊಪ್ಪಳ: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬಹುಭಾಷಾ ತಜ್ಞರೂ ಆಗಿರುವ 94 ವರ್ಷದ ಡಾ. ಪಂಚಾಕ್ಷರಿ ಹಿರೇಮಠ ಅವರು ತವರೂರು ಬಿಸರಳ್ಳಿ ಗ್ರಾಮಕ್ಕೆ ತೆರಳುವ ಮುನ್ನ ಇಲ್ಲಿ ತಮ್ಮ ದೊಡ್ಡ ಶಿಷ್ಯವರ್ಗ ಹಾಗೂ ಸ್ನೇಹಿತರನ್ನು ಭೇಟಿದರು.

ಪತ್ನಿ ಶಾಂತಾದೇವಿ ಮತ್ತು ಕುಟುಂಬದವರ ಜೊತೆ ಬಂದಿದ್ದ ಅವರೊಂದಿಗೆ ಸಂವಾದ ನಡೆಸುವ ಸಲುವಾಗಿ ನಗರದಲ್ಲಿ ಮಂಗಳವಾರ ಸೌಹಾರ್ದ ಕೂಟ ಏರ್ಪಡಿಸಲಾಗಿತ್ತು. ಬಂಡಾಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಅವರು ಪಂಚಾಕ್ಷರಿ ಹಿರೇಮಠರ ವ್ಯಕ್ತಿತ್ವದ ಕುರಿತು ಮಾತನಾಡಿದರು.

‘ಮಾತುಗಳಿಗೆ ಸ್ಪಂದಿಸಲೂ ಆಗದ ವಯೋಸಹಜ ವೃದ್ಧಾಪ್ಯದಲ್ಲಿಯೂ, ಮಾತನಾಡಲಾಗದಿದ್ದರೂ ಅವರು ಇಂದು ನಮಗೆಲ್ಲ ಮಾತೃನೆಲದ ಶ್ರೇಷ್ಠತೆಯನ್ನು ಸಾರಿದ್ದಾರೆ’ ಎಂದು ಹೇಳಿದರು.

ADVERTISEMENT

ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ ಮಾತನಾಡಿ ‘ಹಿರೇಮಠರನ್ನು ಮೊದಲಿನಿಂದಲೂ ಚಿಕ್ಕಪ್ಪ ಎಂದೇ ಕರೆಯುತ್ತೇನೆ. ಇವರ ತಾಯಿ ಪಟ್ಟ ಪರಿಶ್ರಮದ ಕಾರಣ ಉನ್ನತ ಸ್ಥಾನದ ಹೆಸರು ಗಳಿಸಿಕೊಂಡರು. ಹೈದರಾಬಾದ್ ಪ್ರಾಂತ್ಯದ ವಿದ್ಯಾರ್ಥಿಗಳ ಪರವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪಾವಟೆ ಅವರಂಥವರ ಎದುರೂ ವಾದಿಸಿ ಅವರ ಮನಸ್ಸು ಕರಗಿಸಿದ್ದರು. ಈಗಿನದ್ದು ಬಹು ಭಾವನಾತ್ಮಕ ಭೇಟಿಯಾಗಿದೆ‘ ಎಂದರು.

ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘ, ಕದಳಿ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದಅವರನ್ನುಸನ್ಮಾನಿಸಲಾಯಿತು.

ಕವಯಿತ್ರಿ ಶಾರದಾ ರಜಪೂತ, ಪಂಚಾಕ್ಷರಿ ಅವರ ಪುತ್ರರಾದ ಮಲ್ಲಿಕಾರ್ಜುನ ಹಿರೇಮಠ, ಜಯದೇವ ಹಿರೇಮಠ ಮತ್ತು ವಿಜಯಲಕ್ಷ್ಮೀ ಹಿರೇಮಠ, ನಿರ್ಮಲಾ ಬಳ್ಳೊಳ್ಳಿ, ಸಾವಿತ್ರಿ ಮುಜುಂದಾರ್, ಶಾರದಾ ರಜಪೂತ, ವೈಷ್ಣವಿ ರಜಪೂತ, ಅರುಣಾ ನರೇಂದ್ರ, ನರೇಂದ್ರ ಪಾಟೀಲ, ಜಿ.ಎಸ್. ಗೋನಾಳ, ರಾಚಪ್ಪ ಕೇಸರಭಾವಿ, ಈಶ್ವರ ಹತ್ತಿ, ಬಸವರಾಜ ಶೀಲವಂತರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.