ಜೀರಾಳ (ಗಂಗಾವತಿ): ‘ಬೇಸಿಗೆಯಲ್ಲಿ ನರೇಗಾ ಯೋಜನೆ ಅಡಿ 60 ದಿನ ಕೆಲಸ ಮಾಡಲು ಅವಕಾಶ ಇದೆ. ಕಾರ್ಮಿಕರು ಇದರ ಪ್ರಯೋಜನ ಪಡೆಯಬೇಕು’ ಎಂದು ಶ್ರೀರಾಮನಗರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವತ್ಸಲಾ ಮನವಿ ಮಾಡಿದರು.
ತಾಲ್ಲೂಕಿನ ಜೀರಾಳದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಬುಧವಾರ ನಡೆದ ‘ದುಡಿಯೋಣ ಬಾ’ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ಜನರು ಕೆಲಸವಿಲ್ಲದೆ ಕಷ್ಟ ಅನುಭವಿಸುತ್ತಾರೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ‘ದುಡಿಯೋಣ ಬಾ’ ಅಭಿಯಾನ ಆರಂಭಿಸಿದೆ. ಎಲ್ಲ ಕಾರ್ಮಿಕರು ಕೆಲಸಕ್ಕೆ ಬೇಡಿಕೆ ಸಲ್ಲಿಸಿ ನರೇಗಾ ಕೆಲಸ ಮಾಡಲು ಮುಂದೆ ಬರಬೇಕು’ ಎಂದು ಹೇಳಿದರು.
‘ವರ್ಷದಲ್ಲಿ ನೂರು ದಿನ ದುಡಿಯಲು ಅವಕಾಶ ಇದೆ. ಜಾಬ್ ಕಾರ್ಡ್ ಇದ್ದವರು ಕೆಲಸಕ್ಕೆ ಬರಬೇಕು’ ಎಂದರು.
ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ 1500 ಕಾರ್ಮಿಕರು ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ರೆಡ್ಡಿ ವೀರರಾಜು, ಟಿಎಇ ಹಜರತ್ ನೂರ್ಬಾಷಾ, ಗ್ರಾ.ಪಂ. ಸಿಬ್ಬಂದಿ ರಮೇಶ, ಮಹೇಶ ಹಾಗೂ ಕಾರ್ಮಿಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.