
ಅಳವಂಡಿ: ಸಮೀಪದ ಕಾತರಕಿ ಗ್ರಾಮದಲ್ಲಿ 9 ವರ್ಷಗಳ ನಂತರ ಗ್ರಾಮದೇವತೆ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ನ.23 ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಜಾತ್ರೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆ ಪೂರ್ಣಗೊಂಡಿವೆ.
ಗ್ರಾಮದ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಮನೆ ಮಾಡಿದ್ದು, ಜಾತ್ರೆ ನಿಮಿತ್ತ ಗ್ರಾಮವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಮೂರು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮಹಾದಾಸೋಹ ನಡೆಯಲಿದೆ. ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನ.23 ರಂದು ಭಾನುವಾರ ಗಂಗಾಪೂಜೆ, ಕುಂಭಮೇಳ, ದೇವಿಗೆ ವಿಶೇಷ ಪೂಜೆ ಜರುಗಲಿದೆ. ಗ್ರಾಮದೇವತೆ ಮೆರವಣಿಗೆಯ ಮೂಲಕ ಚೌಕಿ ಕಟ್ಟೆಗೆ ಸ್ಥಾಪಿಸಲಾಗುವುದು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳು ಹಾಗೂ ಭಾಜ, ಭಜಂತ್ರಿ ಭಾಗವಹಿಸಲಿದೆ.
ನಂತರ ಮಹಿಳಾ ಗೋಷ್ಠಿ ಜರುಗಲಿದೆ. ಗೋಷ್ಠಿಯ ನೇತೃತ್ವ ಈಶ್ವರಿ ವಿಶ್ವ ವಿದ್ಯಾಲಯದ ರಾಜಯೋಗಿನಿ ಅಕ್ಕನವರು, ಅಧ್ಯಕ್ಷತೆ ವನಜಾ ಗಂಗಾಧರ್ ಪುರೋಹಿತ್ ವಹಿಸಲಿದ್ದಾರೆ. ಕಲುಬುರ್ಗಿಯ ಆರ್ಜಿ ನಗರ ಠಾಣೆಯ ಪಿಎಸ್ಐ ಯಶೋದಾ ಕಟಕೆ ಉದ್ಘಾಟಿಸಲಿದ್ದಾರೆ.
ನಂತರ ಉಡಿತುಂಬುವ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಹಾಗೂ ಅನುಭಾವಿಗಳ ಅಮೃತ ಚಿಂತನ, ಕೃಷಿ ಚಿಂತನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಕಾತರಕಿ ಗತ ವೈಭವ ಗ್ರಂಥ ಲೋಕಾರ್ಪಣೆ ಗೊಳ್ಳಲಿದೆ.
ನ.24 ರಂದು ಸೋಮವಾರ ಬೆಳಿಗ್ಗೆ ದೇವಿಮೂರ್ತಿ ಉತ್ಸವ ನಡೆಯಲಿದೆ. ಸಂಜೆ ಭಕ್ತಿ ಹಿತಚಿಂತನ ಸಭೆ ನಡೆಯಲಿದೆ. ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಚನ್ನಬಸವ ಶಿವಯೋಗಿ, ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆತ್ಮಾನಂದ ಸ್ವಾಮೀಜಿ, ಪಿ.ಎಸ್. ಹಿರೇಮಠ, ಚಂದ್ರಾಮಪ್ಪ ಕಣಕಾಲ ಹಾಗೂ ಜನಪ್ರತಿನಿಧಿಗಳು, ಗಣ್ಯರಯ ಉಪಸ್ಥಿತರಿರಲಿದ್ದಾರೆ. ನಂತರ ಗಾಯಕ ಹನುಮಂತ ಲಮಾಣಿ ಹಾಗೂ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ನ.25 ರಂದು ಮಂಗಳವಾರ ಚೌಕಿ ಕಟ್ಟೆಯಿಂದ ವಿವಿಧ ವಾದ್ಯ ಮೇಳಗಳೊಂದಿಗೆ ದೇವಿಮೂರ್ತಿಯನ್ನು ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪನೆ ಗೊಳಿಸಲಾಗುವುದು. ಬಳಿಕ ಸಮಾರೋಪ ಸಮಾರಂಭ ಜರುಗಲಿದೆ. ಸಾನ್ನಿಧ್ಯ ಹೀರಿಶಾಂತವೀರ ಸ್ವಾಮೀಜಿ, ನೇತೃತ್ವ ಅಜಾತ ನಾಗಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಿರುಪಾಕ್ಷಿ ಸ್ವಾಮೀಜಿ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಜಾತ್ರೆಯ ನಿಮಿತ್ತ ಸಾಂಸ್ಕೃತಿಕ ಧಾರ್ಮಿಕ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ಕಾಲ ದಾಸೋಹ ಇರಲಿದೆ. ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆವೆಂಕನಗೌಡ ಹಿರೇಗೌಡ್ರು ರಾಬಕೊವಿ ಹಾಲು ಒಕ್ಕೂಟ ಮಾಜಿ ಅಧ್ಯಕ್ಷ
ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಜನಪ್ರತಿನಿಧಿಗಳು ಗಣ್ಯರು ಮಠಾಧೀಶರು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಜಾತ್ರೆ ಅದ್ದೂರಿಯಾಗಿ ನಡೆಯಲಿದೆಕೃಷ್ಣ ಬೆಟಗೇರಿ ಕಾತರಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.