ADVERTISEMENT

’ಪರಿಸರ ಸಂರಕ್ಷಣೆಗೆ ಕೈಜೋಡಿಸಿ‘

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 15:23 IST
Last Updated 2 ಜೂನ್ 2020, 15:23 IST
ಕುಕನೂರಿನ ಪ್ರವಾಸಿ ಮಂದಿರದ ಮುಂಭಾಗಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮಂಗಳವಾರ ಶಾಸಕ ಹಾಲಪ್ಪ ಆಚಾರ್ ಚಾಲನೆ ನೀಡಿದರು
ಕುಕನೂರಿನ ಪ್ರವಾಸಿ ಮಂದಿರದ ಮುಂಭಾಗಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮಂಗಳವಾರ ಶಾಸಕ ಹಾಲಪ್ಪ ಆಚಾರ್ ಚಾಲನೆ ನೀಡಿದರು   

ಕುಕನೂರು: ಆಧುನಿಕತೆಯ ಭರಾಟೆಯಲ್ಲಿ ಮರಗಳನ್ನು ಬೆಳೆಸುವುದನ್ನು ಪ್ರತಿಯೊಬ್ಬರೂ ಮರೆಯುತ್ತಿದ್ದೇವೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗಲ್ಲಿ ನಗರ ಹಸಿರಿಕರಣ ಯೋಜನೆಯ ಅಂಗವಾಗಿ 1800 ಸಸಿ ನೆಡುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕಾಡು ಬೆಳೆದಾಗ ಮಾತ್ರ ನಾಡು ಉಳಿಯುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಪರಿಸರ ನಾಶದಿಂದ ಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿಲ್ಲ. ಇದರಿಂದ ಭೂಮಿಯಲ್ಲಿನ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಹನಿ ನೀರಿಗೂ ಹಾಹಾಕಾರ ಪ್ರಾರಂಭವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಎಲ್ಲರೂ ಪಣ ತೊಡಬೇಕು‘ ಎಂದರು.

ADVERTISEMENT

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಯುವಕರು ಪರಿಸರ ಸಂರಕ್ಷಣೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರಣ್ಯ ಸಂಪತ್ತು ಉಳಿವಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಡಾ. ಮಹದೇವ ದೇವರು ಮಾತನಾಡಿ, ಮನುಷ್ಯ ಪ್ರಕೃತಿಯ ಆರಾಧಕ. ಆದರೆ, ದುರಾಸೆ ಅವನನ್ನು ಕೆಟ್ಟದಾರಿಗೆ ಕರೆದುಕೊಂಡು ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ, ವಸಂತರಾಜ್, ಶಿವುಕುಮಾರ ನಾಗಲಾಪುರಮಠ, ಶಂಭು ಜೋಳದ, ಬಸವನಗೌಡ ತೊಂಡಿಹಾಳ, ಸಿದ್ದು ಉಳ್ಳಾಗಡ್ಡಿ, ಸಿದ್ದಲಿಂಗಯ್ಯ ಬಂಡಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವಾಯ್ ಬಿಳಗಿ, ವಲಯ ಅರಣ್ಯಧಿಕಾರಿ ಎ.ಎಚ್ ಮುಲ್ಲಾ, ಉಪ ವಲಯ ಅರಣ್ಯಧಿಕಾರಿ ಅಂದಪ್ಪ ಕುರಿ, ಮಹಮ್ಮದ್‌ ಶರೀಪ್ ಪತ್ವಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.