ಕಾರಟಗಿ: ‘ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಪರಿಸರದ ಉಳಿವಿನೊಂದಿಗೆ ನಮ್ಮ ಉಳಿವೂ ಇದೆ ಎಂಬುದನ್ನು ಎಲ್ಲರೂ ಅರಿಯಬೇಕು. ಎಂದು ತಹಶೀಲ್ದಾರ್ ಆರ್. ಕವಿತಾ ಹೇಳಿದರು.
ಪಟ್ಟಣದ ಪುರಸಭೆ ವಿಶ್ವ ಪರಿಸರ ದಿನದ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಹಾಗೂ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನಮ್ಮ ಜೀವನದ ದಿನಚರಿಯಲ್ಲಿ ವಿಶೇಷ ದಿನಗಳಲ್ಲಿ ಸ್ಮರಣೀಯವಾಗಿ ಉಳಿಯುವ ಹಾಗೂ ನಮ್ಮ ಆರೋಗ್ಯ ರಕ್ಷಣೆಗೆ ಪೂರಕವಾಗಿರುವ ಸಸಿಗಳನ್ನು ನೆಟ್ಟು, ಪೋಷಿಸಿ ಬೆಳೆಸುವ ಕೆಲಸಕ್ಕೆ ಮುಂದಾಗಬೇಕು‘ ಎಂದರು.
ಪುರಸಭೆ ಮುಖ್ಯಾಧಿಕಾರಿ ಡಾ. ಎನ್. ಶಿವಲಿಂಗಪ್ಪ ಮಾತನಾಡಿ, ‘ಉತ್ತಮ ಪರಿಸರ ಉಳಿಸುವಿಕೆಗೆ ನಮ್ಮ ಜವಾಬ್ದಾರಿ ಹೆಚ್ಚಿದೆ. ಪ್ರತಿಯೊಬ್ಬರು ಹಬ್ಬ, ಉತ್ಸವಗಳ ಸವಿನೆನಪಿಗಾಗಿ ಸಸಿ ನೆಟ್ಟು, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು‘ ಎಂದರು.
ಪುರಸಭೆಯಿಂದ ಆರಂಭಗೊಂಡ ಜಾಗೃತಿ ಜಾಥಾ ಕನಕದಾಸ ವೃತ್ತಕ್ಕೆ ಆಗಮಿಸಿದ ಬಳಿಕ ಮಾನವ ಸರಪಳಿ ನಿರ್ಮಿಸಿ, ಪರಿಸರ ಜಾಗೃತಿಯ ಘೋಷಣೆಗಳನ್ನು ಹಾಕಲಾಯಿತು. ದಲಾಲಿ ಬಜಾರ್, ಸಂತೆ ಮೈದಾನದ ಮಾರ್ಗವಾಗಿ ಸಿದ್ದೇಶ್ವರ ಬಯಲು ರಂಗ ಮಂದಿರಕ್ಕೆ ಜಾಥಾ ಆಗಮಿಸಿತು.
ಸಬ್ ಇನ್ಸ್ಪೆಕ್ಟರ್ ಅವಿನಾಶ ಕಾಂಬಳೆ ಸಸಿ ನೆಟ್ಟು ಪರಿಸರದ ಬಗೆಗೆ ಸಂದೇಶ ನೀಡಿದರು. ಪುರಸಭೆ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.