
ಕುಕನೂರು: ‘ರಾಜಕಾರಣಿಗಳು ರೈತರ ಪರ ನಿಲ್ಲುವ ಕೆಲಸವಾಗಬೇಕು. ರೈತಪರ ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣರಡ್ಡಿ ಹೇಳಿದರು.
ಇಲ್ಲಿನ ಅನ್ನದಾನೀಶ್ವರ ಶಾಖಾಮಠದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಮತ್ತು ನಗರ ಘಟಕದ ಪ್ರಥಮ ವರ್ಷದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಭಾಗ್ಯರಾಜ ಮಾತನಾಡಿ, ‘ರೈತ ಕುಲ ಸರ್ವನಾಶವಾಗುತ್ತಿದೆ. ರೈತ ಎಂಬ ಪದಕ್ಕೆ ಅರ್ಥ ಉಳಿಯುತ್ತಿಲ್ಲ. ರೈತರನ್ನು ಉಳಿಸುವ ಹಾಗೂ ಬೆಳೆಸುವ ಕಾರ್ಯವಾಗಬೇಕು’ ಎಂದರು.
ಸ್ಥಳೀಯ ಅನ್ನದಾನೀಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿ ಮಾತನಾಡಿ, ‘ರೈತರಿಲ್ಲದೇ ಜಗತ್ತು ಬದುಕಲು ಆಗದು. ಮುಂದಿನ ವರ್ಷ 21 ರೈತರ ಸಾಮೂಹಿಕ ವಿವಾಹ ಮಾಡಬೇಕು’ ಎಂದರು.
ಹಿರೇಮಲ್ಲನಕೇರಿಯ ಸ್ವಾಮೀಜಿ ಮಾತನಾಡಿ, ‘ಬಿತ್ತಿದ ಬೆಳೆಯ ಧಾನ್ಯ ಮನುಷ್ಯ ತಿನ್ನುತ್ತಾನೆ. ನಾವೂ ಸರ್ಕಾರದ ಮೇಲೆ ನಮ್ಮ ತಪ್ಪು ಹಾಕಿ ಪಾರಾಗುತ್ತೇವೆ. ರೈತರು ಬೆಳೆ ಉಳಿಸಿಕೊಂಡು ಹೆಚ್ಚಿನದು ಮಾತ್ರ ಮಾರಾಟ ಮಾಡಿರಿ’ ಎಂದು ಸಲಹೆ ನೀಡಿದರು.
ಕಂಪ್ಲಿಯ ಪ್ರಭು ಸ್ವಾಮೀಜಿ ಮಾತನಾಡಿದರು. ಜಿ.ಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ, ಈರಪ್ಪ ಕುಡಗುಂಟಿ, ಕಳಕಪ್ಪ ಕಂಬಳಿ, ಕಂಪಸಾಗರ ನಾಗಭೂಷಣ ಸ್ವಾಮೀಜಿ, ದೇಶಿಕೇಂದ್ರ ಸ್ವಾಮೀಜಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ತಾಲ್ಲೂಕಾಧ್ಯಕ್ಷ ದೇವಪ್ಪ ಸೊಬಾನದ, ನಗರ ಘಟಕ ಅಧ್ಯಕ್ಷ ಶಿವು ಭಂಗಿ, ಭರತ, ಮಹೇಶ ಕ್ಯಾದಗುಂಪಿ, ಎಂ.ಬಿ ಅಳವಂಡಿ, ಶರಣಪ್ಪ ಯತ್ನಟ್ಟಿ, ಶಿವು ಮದರಿ,ಬಸಪ್ಪ ಮಂಡಲಗೇರಿ, ಈಶಪ್ಪ ಸಬರದ, ಚನ್ನಸಬಯ್ಯ ದೂಪದ ಇದ್ದರು.
21 ಬಂಡಿಗಳ ಮೆರವಣಿಗೆ: ರೈತ ಸಂಘದ ವರ್ಷಾಚರಣೆ ಪ್ರಯುಕ್ತ ಪಟ್ಟಣದ ಕೊಳಿಪೇಟೆ ರಾಘವಾನಂದ ಮಠದಿಂದ 21 ಎತ್ತಿನ ಬಂಡಿಗಳ ಮೆರವಣಿಗೆ ಅನ್ನದಾನೀಶ್ವರ ಮಠದವರೆಗೂ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.