ಗಂಗಾವತಿ: ತಾಲ್ಲೂಕಿನ ಕೇಸರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ರಾಜ್ಯ ಅನ್ನದಾತರ ರೈತ ಸಂಘದ ಪದಾಧಿಕಾರಿಗಳು ಕೆರೆ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಶರಣೇಗೌಡ ಕೇಸರಹಟ್ಟಿ ಮಾತನಾಡಿ,‘ಕಳೆದ ವರ್ಷದಿಂದ ನರೇಗಾ ಯೋಜನೆ ಅಡಿ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಉದ್ಯೋಗ ಖಾತರಿಯ ಕೋಟ್ಯಾಂತರ ಹಣ ಬಳಕೆ ಮಾಡಲಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಕೂಡ ಕೆರೆ ಅಭಿವೃದ್ಧಿ ಮಾಡಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮುಂದೆ ಬಂದಿದ್ದು, ನೀರಾವರಿ ಇಲಾಖೆ ಅನುದಾನವನ್ನು ಬಳಕೆ ಮಾಡಲಾಗುತ್ತಿದೆ. ಈ ರೀತಿಯಾಗಿ ನಾನಾ ಯೋಜನೆಗಳಲ್ಲಿ ಅನುದಾನ ಬಳಕೆ ಮಾಡಿಕೊಂಡು ಕೆರೆ ಅಭಿವೃದ್ಧಿ ಮಾಡಿದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದು ದೂರಿದರು.
ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಕೈಗೊಳ್ಳದೆ ಕಳಪೆ ಕಾಮಗಾರಿ ಮಾಡಿ, ಅನುದಾನ ದುರುಪಯೋಗ ಮಾಡುತ್ತಿದ್ದಾರೆ. ಈ ರೀತಿಯಾಗಿ ಕಳಪೆ ಕಾಮಗಾರಿ ಕೈಗೊಂಡು ಕೋಟಿಗಟ್ಟಲೆ ಹಣ ಹಾಳು ಮಾಡಲಾಗುತ್ತಿದೆ. ಕೂಡಲೇ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಕಾರ್ಯಕರ್ತರಾದ ರವಿಕುಮಾರ ಕುರುಬರ, ಪೀರಸಾಬ್ ಹಾಗೂ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.