ಮುನಿರಾಬಾದ್:ತುಂಗಭದ್ರಾ ಯೋಜನೆಯ ಎಡದಂಡೆ ಮುಖ್ಯಕಾಲುವೆ ಹಾಗೂ ವಿಜಯನಗರ ಕಾಲುವೆ ವ್ಯಾಪ್ತಿಯಲ್ಲಿ ಎರಡನೇ ಬೆಳೆ ಭತ್ತವನ್ನು ನಾಟಿ ಮಾಡಲಾಗುತ್ತಿದೆ.
ಕೊಪ್ಪಳ ತಾಲ್ಲೂಕಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮುನಿರಾಬಾದ್, ಹಿಟ್ನಾಳ, ಹುಲಿಗಿ, ಕಂಪಸಾಗರ, ಅಗಳಕೇರಾ, ಶಿವಪುರ, ಬಂಡಿಹರ್ಲಾಪುರ, ಬಸಾಪುರ ಸೇರಿ ಹಲವು ಗ್ರಾಮಗಳು ನೀರಾವರಿಗೆ ಒಳಪಟ್ಟಿವೆ. ಎಡದಂಡೆ ಮುಖ್ಯಕಾಲುವೆ ಗಂಗಾವತಿ, ಕಾರಟಗಿ ತಾಲ್ಲೂಕುಗಳನ್ನು ಒಳಗೊಂಡು ಮುಂದೆ ರಾಯಚೂರು ಜಿಲ್ಲೆಯನ್ನು ಪ್ರವೇಶಿಸುತ್ತದೆ.
ಡಿಸೆಂಬರ್ನಲ್ಲಿ ಭತ್ತ ಕಟಾವು ಮಾಡಿರುವ ರೈತರು, ಎರಡನೇ ಬೆಳೆಗೆ ಸಸಿ ಮಡಿಗಳಲ್ಲಿ ಭತ್ತದ ಸಸಿಗಳನ್ನು ಬೆಳೆಸಿದ್ದರು. ಡಿಸೆಂಬರ್ ತಿಂಗಳಿನಲ್ಲಿ ಕೆಲವರು ಸಸಿ ನಾಟಿ ಮಾಡಿದ್ದು, ಕೆಲವು ಭಾಗಗಳಲ್ಲಿ ಇನ್ನೂ ಸಸಿ ನಾಟಿ ಪ್ರಗತಿಯಲ್ಲಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಸುಧಾರಿತ ಭತ್ತದ ತಳಿಗಳಾದ ಸೋನಾಮಸೂರಿ, ಆರೆನ್ನಾರ್, ಗಂಗಾ-ಕಾವೇರಿ ಜನಪ್ರಿಯ ತಳಿಗಳಾಗಿವೆ.
ಬೇಸಿಗೆ ಬೆಳೆಗೆ ರೈತ ತಯಾರಿ ನಡೆಸಿದ್ದಾನೆ.
ಪ್ರತಿ ವರ್ಷದಂತೆ ಈ ಬಾರಿಯೂ ರೈತರು ಎರಡನೇ ಬೆಳೆಗೆ ತುಂಗಭದ್ರಾ ಜಲಾಶಯದ ನೀರು ಸಾಕಾಗುತ್ತದೆಯೇ ಎಂಬ ಜಿಜ್ಞಾಸೆಯಲ್ಲಿದ್ದಾರೆ. ಜಲ ಸಂಪನ್ಮೂಲ ಇಲಾಖೆ ಸಂಪ್ರದಾಯದಂತೆ ನೀರು ಉಳಿತಾಯ ಮಾಡಲು ಕಡಿಮೆ ನೀರು ಬೇಡುವ ಭತ್ತಕ್ಕೆ ಪರ್ಯಾಯ ಬೆಳೆಯನ್ನು ಬೆಳೆಯುವಂತೆ ರೈತರಲ್ಲಿ ಮನವಿ ಮಾಡಿದೆ. ಗಂಗಾವತಿ ಮತ್ತು ಕಾರಟಗಿ ಭಾಗದಲ್ಲಿ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಉಪಕಾಲುವೆಗಳನ್ನು ದುರಸ್ತಿಮಾಡಿ ಎಂದು ರೈತರು ಪ್ರತಿಭಟನೆಯ ಮೂಲಕ ಸರ್ಕಾರನ್ನು ಒತ್ತಾಯಿಸುತ್ತಿದ್ದಾರೆ. ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಮತ್ತು ಗಂಗಾವತಿ ಕೃಷಿಸಂಶೋಧನಾ ಕೇಂದ್ರ ಭತ್ತ ಬೆಳೆಯುವ ಮತ್ತು ಕೀಟ, ರೋಗಬಾಧೆಗೆ ಸಲಹೆ ನೀಡುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.