ಗಂಗಾವತಿ: ಗ್ರಂಥಾಲಯಗಳು ಜ್ಞಾನ ಸಂಪತ್ತಿನ ಆಗರವಾಗಿವೆ. ಪತ್ರಕರ್ತರು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಅಧ್ಯಯನಕ್ಕೆ ಪೂರಕವಾಗಿವೆ ಎಂದು ಶಾಸಕ ಪರಣ್ಣ ಮುನವಳ್ಳಿ ಅಭಿಪ್ರಾಯಪಟ್ಟರು.
ನಗರದ ತಾಲ್ಲೂಕು ಪಂಚಾಯಿತಿ ಹಿಂಬದಿ ಇರುವ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗ್ರಂಥಾಲಯ ಕಟ್ಟಡ ನಿರ್ಮಾಣ ಮುಂದುವರಿದ ಕಾಮಗಾರಿಗೆ ಮಂಗಳವಾರ ಪೂಜೆ ಸಲ್ಲಿಸಿ ಮಾತನಾಡಿದರು.
ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸದ ಜೊತೆಗೆ ಅಭಿವೃದ್ಧಿಪರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತವಾದ ಪತ್ರಿಕಾ ಭವನ ನಿರ್ಮಿಸಿರುವ ‘ಕಾನಿಪಸ’ದ ಸದಸ್ಯರು ಇದೀಗ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಪತ್ರಕರ್ತರ ಈ ಸಮಾಜಮುಖಿ ಕಾರ್ಯ ಮೆಚ್ಚಿ, ನನೆಗುದಿಗೆ ಬಿದ್ದಿರುವ ಗ್ರಂಥಾಲಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ₹ 5 ಲಕ್ಷ ಅನುದಾನ ನೀಡಿದರು. ಶೀಘ್ರವಾಗಿ ಗುಣಮಟ್ಟದ ಕಾಮಗಾರಿ ನಡೆಸಿ, ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬೆಳಗಲ್ಮಠ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಹರೀಶ ಕುಲಕರ್ಣಿ, ಪತ್ರಕರ್ತರಾದ ವಿರೇಶ ಬಳ್ಳಾರಿ, ಕೃಷ್ಣಾ ವಿರುಪಾಪುರ, ನಾಗರಾಜ ಇಂಗಳಗಿ, ದೇವರಾಜ, ಶ್ರೀನಿವಾಸ ದೇವಿಕೇರಿ, ಚಂದ್ರಶೇಖರ ಮುಕ್ಕುಂದಿ, ದಶರಥ, ವಸಂತ, ರವಿ ಸಾಕ್ಷಿ, ವಾಗೇಶಸ್ವಾಮಿ, ಕಾಸಿಂ ಕೊನಿ, ಗಾದಿಲಿಂಗಪ್ಪ, ಕಾಸಿ, ಮಲ್ಲಿಕಾರ್ಜುನ, ಮಂಜುನಾಥ ಗುಡ್ಲಾನೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.