ಗಾಣದಾಳ (ಯಲಬುರ್ಗಾ): ತಾಲ್ಲೂಕಿನ ಗಾಣದಾಳ ಗ್ರಾಮದಲ್ಲಿ ಗೆಳೆಯರು ಹಾಗೂ ಹಿತೈಷಿಗಳು ಸೇರಿ ಅಂಗವಿಕಲರೊಬ್ಬರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ.
ಸೋಮನಾಥ ಕನಕಪ್ಪ ಮಲ್ಲಾಪುರ ಅವರು ವಿದ್ಯುತ್ ಸಂಬಂಧಿ ಕೆಲಸ ಮಾಡುವ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಕಾಲು ಕಳೆದುಕೊಂಡಿದ್ದರು. ಸಮಾನ ಮನಸ್ಕರು ಸೇರಿ ಅವರು ಸ್ವಯಂ ಉದ್ಯೋಗದಲ್ಲಿ ತೊಡಗುವಂತೆ ಮಾಡಿದ್ದಾರೆ.
ಹಲವು ಗೆಳೆಯರು ಹಾಗೂ ಶರಣಪ್ಪ ಗುಂಗಾಡಿ ಸೇರಿ ಕಿರಾಣಿ ಅಂಗಡಿ ತೆರೆದು ವ್ಯವಹಾರ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕುಳಿತಲ್ಲಿಯೇ ವ್ಯವಹಾರ ನಡೆಸಿ ಆರ್ಥಿಕವಾಗಿ ಸಬಲರಾಗುವಂತೆ ಮಾಡಿದ್ದಾರೆ. ಬೆಂಗಳೂರಿ
ನಲ್ಲಿರುವ ಸೋಮನಾಥನ ಗೆಳೆಯರಾದ ಮುನ್ನಾಬಾಯಿ ಹಾಗೂ ಮಂಜುನಾಥ ಅಂಗಡಿ ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಗ್ರಾಮದ ಗೆಳೆಯರು ಹಾಗೂ ಶರಣಪ್ಪ ಗುಂಗಾಡಿ ₹20 ಸಾವಿರ ಆರ್ಥಿಕ ನೆರವು ನೀಡಿ ಅಂಗಡಿ ಸಾಮಗ್ರಿ ಖರೀದಿಗೆ ನೆರವಾಗಿದ್ದಾರೆ. ಅಲ್ಲದೇ ವಿವಿಧ ರೀತಿಯಲ್ಲಿ ಗೆಳೆಯರೆಲ್ಲರೂ ಪ್ರೋತ್ಸಾಹಿಸಿ ಆತ್ಮಸ್ಥೈರ್ಯದಿಂದ ಜೀವನ ನಡೆಸಿಕೊಂಡು ಹೋಗಲಿ ಎಂದು ದಾರಿಮಾಡಿಕೊಟ್ಟಿದ್ದಾರೆ.
‘ಸಣ್ಣಪುಟ್ಟ ವಿದ್ಯುತ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಾಗಿ ಕಾಲು ಕಳೆದುಕೊಂಡಾಗ ಬದುಕು ನಡೆಸುವುದೇ ಕಷ್ಟವಾಗಿತ್ತು. ಗೆಳೆಯರು ನೆರವು ನೀಡಿ ಬದುಕಿಗೆ ಹೊಸ ಚೈತನ್ಯ ತುಂಬಿದ್ದಾರೆ. ಮಾನವೀಯತೆ ಮೆರೆದು ಜೀವನಕ್ಕೆ ಆಸರೆಯಾಗಿರುವ ಗೆಳೆಯರೆಲ್ಲರೂ ನನ್ನ ಪಾಲಿನ ದೇವರು ಎಂದೇ ಭಾವಿಸಿದ್ದೇನೆ’ ಎಂದು ಸೋಮನಾಥ ತಿಳಿಸಿದರು.
‘ಬದುಕು ರೂಪಿಸಿಕೊಳ್ಳಲಿ ಎಂದು ಎಲ್ಲರೂ ಸೇರಿ ನೆರವು ನೀಡಿದ್ದೇವೆ’ ಎಂದು ಕೃಷಿ ಅಧಿಕಾರಿ ಶರಣಪ್ಪ ಗುಂಗಾಡಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.