ಕುಷ್ಟಗಿ: ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಪಟ್ಟಣದ ರೈತ ರಮೇಶ ಕೊನಸಾಗರ ಅವರಿಗೆ ಗೆಳೆಯರು ಸಹಾಯ ಮಾಡುವುದರ ಜೊತೆಗೆ ಧೈರ್ಯವನ್ನು ತುಂಬಿದರು. ಗೆಳೆತನದ ಮಹತ್ವ ಸಾರಿದರು.
‘ಕೊರೊನಾ ಸೋಂಕಿನಿಂದ ಬಳಲುತ್ತಿರುವ ವಿಷಯ ಗೊತ್ತಾದ ಕೂಡಲೇ ಆತಂಕವಾಯಿತು. ಆಪ್ತರು ಕೂಡ ಮಾತನಾಡಲು ಹಿಂಜರಿದರು. ಮುಖಾಮುಖಿ ಮಾತನಾಡುವುದು ಕಷ್ಟವಾಗಿತ್ತು. ಅಂತಹ ದಿನಗಳಲ್ಲಿಯೇ ಸ್ನೇಹಿತರು ಜೊತೆ ನಿಂತರು. ಅಧೀರಗೊಳ್ಳುತ್ತಿದ್ದ ನನ್ನೊಳಗೆ ಧೈರ್ಯ ತುಂಬಿದರು’ ಎಂದು ರಮೇಶ ಕೊನಸಾಗರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೋವಿಡ್ನಿಂದ ಬಳಲುತ್ತಿರುವುದು ತಿಳಿದು ಸ್ನೇಹಿತರಾದ ಬಾಲಾಜಿ, ಬಾಬಣ್ಣ ಅವರು ಧೈರ್ಯದ ಮಾತು ಹೇಳಿದರು. ‘ನೀನು ಈಗ ಯುದ್ಧದ ಭೂಮಿಯಲ್ಲಿ ಇರುವಂತೆ ಕಲ್ಪಿಸಿಕೊಂಡು ವೈರಿಯ ವಿರುದ್ಧ ಹೋರಾಡು. ಎಷ್ಟೇ ಕಷ್ಟನಷ್ಟವಾದರೂ ಸೈನಿಕ ಹೋರಾಟ ಕೈಬಿಡುವುದಿಲ್ಲ. ಹಾಗೆಯೇ ನೀನು ಕೂಡ ಮುನ್ನುಗ್ಗು’ ಎಂದು ಧೈರ್ಯ ತುಂಬಿದರು. ಅವರ ಮಾತುಗಳಿಂದ ನಿಧಾನವಾಗಿ ಚೇತರಿಸಿಕೊಂಡೆ’ ಎಂದು ಅವರು ತಿಳಿಸಿದರು.
‘ಗಂಗಾವತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿರಿಯ ಸಹೋದರ ಮಹೇಶ ಕೊನಸಾಗರಗೆ ಬಾಲ್ಯ ಸ್ನೇಹಿತ ಬಸವರಾಜ.ಎನ್.ಪಾಟೀಲ ನೆರವಾದರು. ಪ್ರತಿ ನಿತ್ಯ ಭೇಟಿಯಾಗಿ, ಧೈರ್ಯ ತುಂಬುತ್ತಿದ್ದರು. ಆದರೂ ಮಹೇಶಗೆ ಉಳಿಸಿಕೊಳ್ಳಲು ಆಗಲಿಲ್ಲ. ಬಸವರಾಜ ಅವರ ಪ್ರೀತಿಯ ಗೆಳೆತನ ಮರೆಯಲಾಗದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.