
ಗಂಗಾವತಿ: ಅಂಜನಾದ್ರಿ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸುವ ಮಾಲಾಧಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಪ್ರಸಾದ, ಊಟದ ವ್ಯವಸ್ಥೆಗೆ ವೇದಪಾಠ ಶಾಲೆ ಹಿಂಬದಿ ಪೆಂಡಾಲ್, ಕೌಂಟರ್ಗಳನ್ನು ಸಿದ್ದಪಡಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ಸಹ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟ ಏರಿ, ಆಂಜನೇಯನ ದರ್ಶನ ಪಡೆದು, ವೇದ ಪಾಠ ಶಾಲೆಯ ಬಳಿ ಪ್ರಸಾದ ಸ್ವೀಕರಿಸುವುದು ವಾಡಿಕೆ. ನಂತರ ಮನೆಗೆ ಪ್ರಸಾದದ ರೂಪದಲ್ಲಿ ಲಡ್ಡು, ತೀರ್ಥದ ಬಾಟಲ್ಗಳನ್ನು ಕೊಂಡೊಯ್ಯುತ್ತಾರೆ.
ಈಗಾಗಲೇ ವೇದಪಾಠ ಶಾಲೆಯ ಬಳಿ ಬೃಹತ್ ಪೆಂಡಾಲ್ ಹಾಕಿ, 30ಕ್ಕೂ ಹೆಚ್ಚು ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವಿತರಣೆಗೆ 10 ಕೌಂಟರ್ಗಳನ್ನು ರಚಿಸಲಾಗಿದೆ. ಸ್ಥಳದಲ್ಲಿ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ.
ಅಡುಗೆ ತಯಾರಿಕೆ ಸ್ಥಳದಲ್ಲಿ ಸಿಸಿ ಕಣ್ಗಾವಲು: ಅಡುಗೆ ವೇಳೆ ಯಾವುದೇ ಅವಗಡ ಸಂಭವಿಸಿದಂತೆ ಎಚ್ಚರಿಕೆವಹಿಸಲು 4 ರಿಂದ 5 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಆಹಾರ ಪರಿಶೀಲನೆಗೆ ಅಧಿಕಾರಿಗಳ ತಂಡ ಸಹ ರಚಿಸಲಾಗಿದೆ.
1 ಲಕ್ಷ ಜನರಿಗೆ ಅಡುಗೆ ತಯಾರಿ: ಹನುಮಮಾಲಾ ವಿಸರ್ಜನೆ ಜಿಲ್ಲಾಡಳಿತ 1 ಲಕ್ಷಕ್ಕೂ ಹೆಚ್ಚು ಜನರು ಬರುವ ನೀರಿಕ್ಷೆಯಿದೆ. ಮಂಗಳವಾರ ಸಂಜೆಯಿಂದಲೇ ಅಡುಗೆ ತಯಾರಿ ಆರಂಭವಾಗಲಿದ್ದು, ಸಂಜೆ ಬೆಟ್ಟಕ್ಕೆ ಬರುವ ಮಾಲಾಧಾರಿಗಳಿಗೆ ಪಲಾವ್, ಮೊಸರು ಚಟ್ನಿ ಮಾಡಲಾಗುತ್ತಿದೆ.
ಮಾಲೆ ವಿಸರ್ಜನೆ ಭಾಗವಾಗಿ ಮಂಗಳವಾರ ಮಧ್ಯ ರಾತ್ರಿಯಿಂದ ಊಟ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದು, ಕೇಸರಿ ಬಾತ್, ಗೋದಿ ಪಾಯಸ, ಅನ್ನ, ಸಾಂಬರ್, ಟಮಾಟೆ ಚಟ್ನಿ ಮಾಡಲಾಗುತ್ತಿದೆ. ಅಡುಗೆ ಮಾಡಲು ಮಹಿಳೆಯರು, ಪುರುಷರು ಸೇರಿ 100 ರಿಂದ 150 ಸಿಬ್ಬಂದಿ ಇರಲಿದ್ದಾರೆ.
ಅಡುಗೆ ತಯಾರಿಗೆ ಸಾಮಾಗ್ರಿ ಎಷ್ಟೇಷ್ಟು: ಹನುಮಮಾಲೆ ವಿಸರ್ಜನೆ ಅಡುಗೆ ತಯಾರಿ ತಾಯಪ್ಪ ಭಟ್ಟರ ನೇತೃತ್ವದಲ್ಲಿ ನಡೆಯಲಿದೆ. 80 ಕ್ವಿಂಟಲ್ ಅಕ್ಕಿ, 15 ಕ್ವಿಂಟಲ್ ತೊಗರಿ,10 ಕ್ವಿಂಟಲ್ ಗೋದಿ, 130 ಬಾಕ್ಸ್ ಟಮಾಟೆ, 30 ಬಾಕ್ಸ್ ಎಣ್ಣೆ, ತುಪ್ಪ, ಈರುಳ್ಳಿ, 2ಸಾವಿರ ಕಟ್ ಪಾಲಾಕ್, ಮೆಂತೆ ಸೊಪ್ಪು, 1 ಸಾವಿರ್ ಕಟ್ ಕೋತಂಬರಿ, ಬಿನ್ಸ್, ಕ್ಯಾರೆಟ್ ಸೇರಿ ಇತರೆ ಸಾಮಗ್ರಗಳ ಸಿದ್ಧತೆ ಮಾಡಲಾಗಿದೆ.
ಪೊಲೀಸ್ ಸಹಾಯವಾಣಿ ಕೇಂದ್ರ: ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಿಂದ ವೇದಪಾಠ ಶಾಲೆಯ ಹತ್ತಿರ ಪೊಲೀಸ್ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಕರೆಗೆ ಮೊ.9480803730, 08533230854 ಸಂಖ್ಯೆಗಳು ನೀಡಿದೆ.
Highlights - ಸಿಸಿಟಿವಿ ಕಣ್ಗಾವಲಿನಲ್ಲಿ ಅಡುಗೆ ತಯಾರಿ ಪೊಲೀಸ್ ಸಹಾಯವಾಣಿ ಕೇಂದ್ರ ಆರಂಭ ಅಂತಿಮ ಸಿದ್ದತೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿ
ಪ್ರಸಾದವಾಗಿ 60 ಸಾವಿರ ಲಡ್ಡು
ಅಂಜನಾದ್ರಿಗೆ ಬರುವ ಮಾಲಾಧಾರಿಗಳಿಗೆ ಪ್ರಸಾದವಾಗಿ ಲಡ್ಡು ತೀರ್ಥದ ಬಾಟಲ್ ವಿತರಿಸುವ ವ್ಯವಸ್ಥೆ ಜಿಲ್ಲಾಡಳಿತ ಮಾಡಿದೆ. ನ.21ರಿಂದಲೇ ವೇದಪಾಠ ಶಾಲೆಯಲ್ಲಿ ಲಡ್ಡು ತಯಾರಿಕೆ ಕೆಲಸ ಆರಂಭವಾಗಿದ್ದು ನಿರಂತರವಾಗಿ 10 ದಿನಕಾಲ 40 ಜನ ಮಹಿಳೆಯರು 10 ಜನ ಅಡುಗೆ ಭಟ್ಟರು ಕೆಲಸ ಮಾಡಿದ್ದಾರೆ. ಲಡ್ಡು ತಯಾರಿಕೆಗೆ 60 ಡಬ್ಬಿ ಎಣ್ಣೆ 17 ಕ್ವಿಂಟಲ್ ಕಡ್ಲೆ ಹಿಟ್ಟು 25 ಕ್ವಿಂಟಲ್ ಸಕ್ಕರೆ 50ಕೆಜಿ ಗೋಡಂಬಿ 50ಕೆಜಿ ಸಕ್ಕರೆ 80ಕೆಜಿ ತುಪ್ಪ 10 ಕೆಜಿ ಯಾಲಕ್ಕಿ ಪೌಡರ್ ಬಳಸಲಾಗುತ್ತಿದೆ. ಇನ್ನೂ ಲಡ್ಡು ಜೊತೆಗೆ 20 ಸಾವಿರ ತೀರ್ಥದ ಬಾಟಲ್ಗಳನ್ನು ಸಹ ತುಂಬಲಾಗುತ್ತಿದೆ.
ಬೆಟ್ಟದಲ್ಲಿ ಒಬ್ಬಬ್ಬರಾಗಿ ತೆರಳದಂತೆ ಸೂಚನೆ
ಅಂಜನಾದ್ರಿ ಬೆಟ್ಟದ ಸುತ್ತಮುತ್ತ ಬೃಹತ್ ಬೆಟ್ಟ ಅಂಟಿಕೊಂಡಿದ್ದು ಈ ಸ್ಥಳ ಕರಡಿ ಚಿರತೆ ಸೇರಿ ವನ್ಯಜೀವಿಗಳ ವಾಸದ ಸ್ಥಳವಾಗಿದೆ. ಈಚೆಗೆ ಚಿಕ್ಕರಾಂಪುರ-2 ಗ್ರಾಮದ ಬಳಿ ಚಿರತೆಯೊಂದು ಸೆರೆಹಿಡಿದು ದೂರದ ಸ್ಥಳದಲ್ಲಿ ಬಿಟ್ಟು ಬರಲಾಗಿದೆ. ಹಾಗಾಗಿ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟದಲ್ಲಿನ ಗುಹೆ ಗಿಡಗಳ ಪೊದೆ ದೂರದ ಸ್ಥಳಗಳಿಗೆ ಏಕಾಂತ ವಾಗಿ ತೆರಳದಂತೆ ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.