ಹುಲಿಗಿ(ಮುನಿರಾಬಾದ್): ಹುಲಿಗಿ ಗ್ರಾ.ಪಂ ವ್ಯಾಪ್ತಿಯ ಹೊನ್ನೂರಮಟ್ಟಿ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವಜ್ ಅಭಿಪ್ರಾಯಪಟ್ಟರು.
ಗುರುವಾರ ಘಟಕಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಕಾರ್ಯ ಚಟುವಟಿಕೆ ವೀಕ್ಷಿಸಿದರು. ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮನೆ ಮತ್ತು ಅಂಗಡಿಗಳ ತ್ಯಾಜ್ಯವನ್ನು ಸ್ವಚ್ಛತಾ ವಾಹಿನಿ ಮೂಲಕ ಸಂಗ್ರಹಿಸಿ ಘಟಕಕ್ಕೆ ತಂದು ಮತ್ತೆ ವಿಂಗಡಿಸಿ ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.
ಘಟಕದ ಗೌರವಾಧ್ಯಕ್ಷ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಅವರು, ಘಟಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಗೋಬರ್ಧನ್, ಗೋಶಾಲೆ, ಎರೆಹುಳು ಗೊಬ್ಬರ ಘಟಕ, ಔಷಧೀಯ ಸಸ್ಯಗಳ ನರ್ಸರಿ ಮತ್ತು ಕಾರ್ಯನಿರ್ವಹಣೆಯನ್ನು ವಿವರಿಸಿ, ಪ್ರತಿ ಗ್ರಾ.ಪಂಗೆ ಒಂದರಂತೆ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಕಷ್ಟ ಸಾಧ್ಯ. ಆದರೆ ಬಹು ಗ್ರಾಮ ಪಂಚಾಯಿತಿ ಒಳಗೊಂಡ ಘಟಕದ ನಿರ್ವಹಣೆ ಸುಲಭವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿ.ಪಂ. ಸಿಇಒ ರಾಹುಲ್ ರತ್ನಂ ಪಾಂಡೆಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಎಂಜನಿಯರ್ ಅಜೀಜ್ ಹುಸೇನ್, ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಳ್ಳಾರಿ ವಲಯದ ಅಧೀಕ್ಷಕ ಎಂಜಿನಿಯರ್ ವೀರಪ್ಪ ಅಡಿವೆಪ್ಪನವರ, ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮಹೇಶ್ ಶಾಸ್ರ್ತಿ, ತಾ.ಪಂ ಇಒ ದುಂಡಪ್ಪ ತುರಾದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ, ಹುಲಿಗಿ ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಗವಿಸಿದ್ದಪ್ಪ, ಹೊಸಳ್ಳಿ ಗ್ರಾ.ಪಂ ಅಧ್ಯಕ್ಷ ಮಾರುತಿ ಬಗನಾಳ, ಪಿಡಿಒಗಳಾದ ಗುರುದೇವಮ್ಮ, ವೀರೇಶ, ಗುರುಸಿದ್ದಪ್ಪ, ತಾ.ಪಂ ಮಾಜಿ ಸದಸ್ಯ ಯಂಕಪ್ಪ ಹೊಸಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.