ಕೊಪ್ಪಳ: ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಭಾನುವಾರ ಶ್ರೀಕರಿಯಮ್ಮ ದೇವಿ ಹಾಗೂ ಶ್ರೀಮಾರುತೇಶ್ವರನ ಕಾರ್ತಿಕೋತ್ಸವ ಅಂಗವಾಗಿ 27ನೇ ವರ್ಷದ ಶ್ರೀಗವಿಸಿದ್ದೇಶ್ವರ ಮಹಾರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ಜಾತ್ರಾ ಮಹೋತ್ಸದ ನಿಮಿತ್ತ ಭಾನುವಾರ ಬೆಳಿಗ್ಗೆ ಶ್ರೀ ಗವಿಸಿದ್ದೇಶ್ವರ ಸ್ವಾಮಿ ಕತೃ ಗದ್ದುಗೆಗೆ ಅಭಿಷೇಕ ಹಾಗೂ ಸಂಜೆ ಶ್ರೀಗವಿಸಿದ್ದೇಶ್ವರ ರಥೋತ್ಸವ, ಸಂಗೀತ ಕಾರ್ಯಕ್ರಮ ಹಾಗೂ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ನ. 21ರಂದು ರಾತ್ರಿ 8ಕ್ಕೆ ಶ್ರೀಗವಿಮಠದ ಹತ್ತಿರ ಬಸವ ಪಟ(ಧ್ವಜಾರೋಹಣ) ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಶ್ರೀದೇವಿಯ ಕಂಕಣಧಾರಣೆ ನಡೆಯಿತು. ನ. 22ರಂದು ಅಭಿಷೇಕ, ಕೊಂಡ ಪೂಜೆ, ಕಾರ್ತಿಕೋತ್ಸವ, ಸಣ್ಣ ರಥೋತ್ಸವ, ಗಂಗಾಮಾತೆಯ ದರ್ಶನ ಮತ್ತು ಬೆಳಗು ಮುಂಜಾನೆ ಶ್ರೀದೇವಿಯ ಪಾಯಸ, ಅಗ್ನಿ ಆಯುವ ಕಾರ್ಯಕ್ರಮ ಜರುಗಿತು. ನ. 23ರಂದು ಶ್ರೀಮಾರುತೇಶ್ವರನಿಗೆ ಕುಂಕುಮ ಪೂಜೆ, ಗಿಡ, ಮುಳ್ಳು ಪಾಲ್ಕಿ, ಅಗ್ನಿ, ಮನೋರಂಜನೆಯ ಅಂಗವಾಗಿ ಡೊಳ್ಳಿನ ವಾದ್ಯ ನಂತರ ಅನ್ನಸಂತರ್ಪಣೆ ಜರುಗಿತು.
ನ. 25ರಂದು ಸಂಜೆ ಶ್ರೀಗವಿಸಿದ್ದೇಶ್ವರ ಮೂರ್ತಿ ಉತ್ಸವ ಹಾಗೂ ಮದ್ದು ಸುಡುವ ಕಾರ್ಯಕ್ರಮ, ನ. 26ರಂದು ಸಂಜೆ ಶ್ರೀಗವಿಸಿದ್ದೇಶ್ವರನ ಕಡಬಿನ ಕಾಳಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ.
ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಹಿರೇಸಿಂದೋಗಿ ಕಪ್ಪತ್ತಮಠದ ಚಿದಾನಂದ ಸ್ವಾಮೀಜಿ, ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಂಗಳೂರಿನ ಅರಳಲೆ ಹಿರೇಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ, ಹೂವಿನಹಡಗಲಿಯ ಶಾಖಾ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮೈನಳ್ಳಿ ಹಿರೇಮಠದ ಸಿದ್ಧೇಶ್ವರ ಶಿವಚಾರ್ಯ ಸ್ವಾಮೀಜಿ, ಬಳಗಾನೂರಿನ ಚಿಕ್ಕೇನಕೊಪ್ಪದ ಚೆನ್ನವೀರ ಶರಣಮಠದ ಶಿವಶಾಂತವೀರ ಶರಣರು, ಹಾಲವರ್ತಿಯ ಜಡೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಗ್ರಾಮ ಹಿರಿಯ ಮುಖಂಡರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.