ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಮಾತನಾಡಿದರು
ಕೊಪ್ಪಳ: ’ಪ್ರೀತಿ ಪ್ರೇಮದ ವಿಚಾರಕ್ಕಾಗಿ ನಡೆದ ಗವಿಸಿದ್ಧಪ್ಪ ನಾಯಕನ ಕೊಲೆ ಪ್ರಕರಣಕ್ಕೆ ಯಾರೂ ಕೋಮುವಾದದ ಬಣ್ಣ ಬಳಿಯಬಾರದು. ಇದರಲ್ಲಿ ರಾಜಕಾರಣ ಮಾಡಬಾರದು. ಕೊಪ್ಪಳದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಜನ ಅನೋನ್ಯವಾಗಿದ್ದಾರೆ’ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಮನವಿ ಮಾಡಿದರು.
ಮುಖಂಡರಾದ ಟಿ. ರತ್ನಾಕರ, ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಸೂಳಿಬಾವಿ, ಚನ್ನಪ್ಪ ಹಂಚಿನಾಳ ಮತ್ತು ಮೃತ ಗವಿಸಿದ್ದಪ್ಪ ನಾಯಕನ ತಂದೆ ನಿಂಗಜ್ಜ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘ಮಗನನ್ನು ಕಳೆದುಕೊಂಡ ನಿಂಗಜ್ಜ ಭೂ ರಹಿತರಾಗಿದ್ದು, ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಸರ್ಕಾರವೇ ಭೂಮಿ ನೀಡಬೇಕು. ಕೊಲೆ ಘಟನೆಯನ್ನು ರಾಜಕೀಯ ಮಾಡಿ ಎರಡೂ ಸಮುದಾಯಗಳ ಜನರಲ್ಲಿ ದ್ವೇಷ ಬಿತ್ತುವ ಕೆಲಸ ಯಾರೂ ಮಾಡಬಾರದು’ ಎಂದರು.
‘ಕೊಲೆ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಲಿ. ಕೊಲೆಗೆ ಪ್ರಚೋದನೆ ನೀಡಿದ ವಿಚಾರದಲ್ಲಿ ಮುಸ್ಲಿಂ ಯುವತಿಯ ಹೆಸರು ಕೂಡ ಕೇಳಿಬಂದಿದ್ದು, ಆಕೆಯನ್ನೂ ತನಿಖೆಗೆ ಒಳಪಡಿಸಲಿ. ಸಾಮಾಜಿಕ ಹಿನ್ನೆಲೆಯಿಂದ ಬಂದ ನಿಂಗಜ್ಜನ ಕುಟುಂಬ ಸಂಕಷ್ಟದಲ್ಲಿದ್ದಾಗ ಯಾರೂ ಬಂದಿರಲಿಲ್ಲ. ಈಗ ಕೆಲವರು ಅದಕ್ಕೆ ಸಂಘಟಿತವಾಗಿ ಕೋಮು ಬಣ್ಣ ಬಳಿದು ಬಿಜೆಪಿ ಘಟನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪರಿಶಿಷ್ಟ ಸಮುದಾಯದ ಜನರಿಗೆ ಏನನ್ನೂ ಮಾಡದ ಕೋಮುವಾದಿ ಬಿಜೆಪಿ ಈಗ ನೊಂದ ಕುಟುಂಬದವರ ಸಂಕಷ್ಟ ಕೇಳಲು ಬಂದಿದೆ’ ಎಂದು ಹೇಳಿದರು.
ನಿಂಗಜ್ಜ ಮಾತನಾಡಿ ’ನನ್ನ ಮಗ ಮುಸ್ಲಿಂ ಸಮಾಜದ ಯುವತಿಯನ್ನು ಪ್ರೀತಿಸುತ್ತಿದ್ದ. ಕೊಲೆ ಮಾಡಿದವನ ಸಾಧಿಕ್ ಕೋಲ್ಕಾರ್ ಕೂಡ ಆ ಯುವತಿಯನ್ನು ಇಷ್ಟಪಟ್ಟಿದ್ದ. ಈ ಪ್ರೀತಿ ಪ್ರೇಮದ ಕಾರಣಕ್ಕಾಗಿ ಕೊಲೆ ನಡೆದಿದೆ ವಿನಃ ಹಿಂದೂ–ಮುಸ್ಲಿಂ ಎನ್ನುವ ವಿಚಾರಕ್ಕೆ ಅಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.