ಕಾರಟಗಿ: ‘ಲಸಿಕೆ ಕುರಿತು ನಿರ್ಲಕ್ಷ ಸಲ್ಲ. ವದಂತಿಗಳಿಗೆ ಕಿವಿಗೊಡದೆ ಎಲ್ಲರೂ ಲಸಿಕೆ ಹಾಕಿಸಿಕೊಂಡು ರೋಗ ನಿರೋಧಕ ಶಕ್ತಿ ಪಡೆಯಬೇಕು’ ಎಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು.
ಡಾ.ರಾಜಕುಮಾರ್ ಕಲಾ ಮಂದಿರದ ಬಳಿ ಲಸಿಕೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಗೆ ಅಗತ್ಯ ಲಸಿಕೆ ಸರಬರಾಜು ಆಗಿದೆ. ಸ್ಥಳೀಯಾಡಳಿ, ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲರ ಗಮನಸೆಳೆದು, ಲಸಿಕೆ ಹಾಕುವಲ್ಲಿ ನಿರತರಾಗಿದ್ದಾರೆ. ಜನರು ಮೊದಲು ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಬಳಿಕ ಇತರ ಕೆಲಸಗಳಿಗೆ ಅಣಿಯಾಗಬೇಕು. ಕೊರೊನಾ ಎಲ್ಲರಿಗೂ ಸಂಕಷ್ಟ ತಂದೊಡ್ಡಿದೆ. ಸರ್ಕಾರ ಅದನ್ನು ಸಮರ್ಥವಾಗಿ ಎದುರಿಸುತ್ತಿದೆ. ಯಾರು ಭಯಪಡುವ ಅಗತ್ಯವಿಲ್ಲ. ಮಾರ್ಗಸೂಚಿ ಪಾಲಿಸುವ ಕೆಲಸ ಮಾಡಿದರೆ ಸಾಕು ಎಂದು ಅವರು ಹೇಳಿದರು. ‘ಪ್ರತಿಯೊಬ್ಬರೂ ಸಂಕಷ್ಟದಲ್ಲಿರುವವರ ನೆರವಿಗೆ ಬರಬೇಕು. ಒಬ್ಬರಿಗೊಬ್ಬರ ಸಹಕಾರ ಅಗತ್ಯ. ಇದರಿಂದ ಕೆಲವರಿಗಾದರೂ ಸಾಂತ್ವನ ಸಿಕ್ಕಂತಾಗುತ್ತದೆ. ಕಣ್ಣೀರು ಒರೆಸಿದಂತಾಗುತ್ತದೆ ಎಂದು ಅವರು ಹೇಳಿದರು.
ಜಾಥಾ ಪಟ್ಟಣದ 6ನೇ ವಾರ್ಡ್, ಉಪ್ಪಾರ ಓಣಿ, ಸಾಲೋಣಿ ಸಹಿತ ವಿವಿಧ ಪ್ರದೇಶದಲ್ಲಿಸಾಗಿತು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶಕುಂತಲಾ ಪಾಟೀಲ, ಡಾ.ನಾಗರಾಜ, ಗ್ರಾಮೀಣ ಇನ್ಸ್ಪೆಕ್ಟರ್ ಉದಯರವಿ, ಸಬ್ ಇನ್ಸ್ಪೆಕ್ಟರ್ ಲಕ್ಕಪ್ಪ ಬಿ.ಅಗ್ನಿ, ತಹಶೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ, ಪ್ರಮುಖ ಕಾರ್ಯಕರ್ತರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.