ADVERTISEMENT

ರೈತರಿಗೆ ಬೆಳೆ ಅಂದಾಜು ಸಮೀಕ್ಷೆ ಮಾಹಿತಿ ನೀಡಿ: ಎಂ.ಪಿ.ಮಾರುತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 5:30 IST
Last Updated 14 ಜುಲೈ 2021, 5:30 IST
ಎಂ.ಪಿ.ಮಾರುತಿ
ಎಂ.ಪಿ.ಮಾರುತಿ   

ಕೊಪ್ಪಳ: ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಅಂದಾಜು ಸಮೀಕ್ಷೆ ಗೆ ಸಂಬಂಧಿಸಿದ ಮಾಹಿತಿಗಳನ್ನು ಎಲ್ಲ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ರೈತರಿಗೆ ತಿಳಿಸಿಕೊಡಬೇಕು ಮತ್ತು ಮಾನದಂಡ ಇಟ್ಟುಕೊಂಡು ನಿಯಮಾನುಸಾರವಾಗಿ ಕೆಲಸ ಮಾಡಬೇಕು ಎಂದುಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಸೋಮವಾರಜಿಲ್ಲಾಡಳಿತ ಭವನದ ಸಭಾಂಗಣನಲ್ಲಿ ನಡೆದ 2021-22ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ಕಟಾವು ಸಮೀಕ್ಷೆ ಕುರಿತು ವಿವಿಧ ಇಲಾಖೆಗಳ ಮೂಲ ಕಾರ್ಯಕರ್ತರು ಹಾಗೂ ಮೇಲ್ವಿಚಾರಕರಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಬೆಳೆ ಸಮೀಕ್ಷೆಯ ಸಮಯದಲ್ಲಿ ತಹಶೀಲ್ದಾರರು, ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ಮಾಡಿ ದತ್ತಾಂಶ ಸಂಗ್ರಹಣೆ ಮಾಡಬೇಕು. ಫಸಲ್ ಬಿಮಾ ಕುರಿತ ಮಾಹಿತಿಯನ್ನು ಜನರಿಗೆ ಮನದಟ್ಟು ಮಾಡಿಸಬೇಕು. ಆಯ್ಕೆಯಾದ ಸರ್ವೆ ನಂಬರ್‌ನ ರೈತರ ಜೊತೆಗೆ ಸತತವಾಗಿ ಸಂಪರ್ಕದಲ್ಲಿರಬೇಕು ಮತ್ತು ಬೆಳೆ ಸಮೀಕ್ಷೆ ಕಾರ್ಯವನ್ನು ಕ್ರಾಪ್ ಕಟ್ಟಿಂಗ್ ಎಕ್ಸ್ಪೆರಿಮೆಂಟ್ ನಿಯಮದ ಪ್ರಕಾರ ಕೈಗೊಳ್ಳಬೇಕು ಎಂದು ಮೂಲ ಕಾರ್ಯಕರ್ತರಿಗೆ ತಿಳಿಸಿದರು.

ADVERTISEMENT

ಸಹಾಯಕ ಆಯುಕ್ತ ನಾರಾಯಣರೆಡ್ಡಿ ಕನಕರೆಡ್ಡಿ ಮಾತನಾಡಿ, 'ಜಿಲ್ಲೆಯಲ್ಲಿ 540ಕ್ಕೂ ಹೆಚ್ಚು ಜನ ಕೋವಿಡ್‌ನಿಂದ ಮೃತಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ದಾಖಲೆ ಪರಿಶೀಲಿಸಿ ಹಾಗೂ ನಮ್ಮ ಜಿಲ್ಲೆಯವರು ಬೇರೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪ ಟ್ಟಿದ್ದರೆ ಅಂತವರು ಸಹ ಪರಿಹಾರ ಧನಕ್ಕೆ ಅರ್ಹರಾಗುತ್ತಾರೆ' ಎಂದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಬೆಳೆ ಅಂದಾಜು ಸಮೀಕ್ಷಾ ಕಾರ್ಯಕ್ಕೆ ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮೂಲ ಕಾರ್ಯಕರ್ತರಾಗಿರುತ್ತಾರೆ. ಲಭ್ಯವಿರುವ ಇಲಾಖಾವಾರು ಅಧಿಕಾರಿಗಳ ಮಾಹಿತಿಯನ್ನಾಧರಿಸಿ ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ವಿವಿಧ ಇಲಾಖೆಯ ಅಧಿಕಾರಿಗಳನ್ನು ಮೇಲ್ವಿಚಾರಣಾಧಿಕಾರಿ ಎಂದು ನೇಮಕ ಮಾಡಲಾಗಿದ್ದು, ಈ ಬಾರಿ ಕಟಾವಿನ ಸಂದರ್ಭದಲ್ಲಿ ಮೂಲ ಕಾರ್ಯಕರ್ತರು ಬೆಳೆ ಸಮೀಕ್ಷೆ ತೆಗೆದುಕೊಂಡಿದ್ದಾರೆಯೇ ಎಂದು ಮೇಲ್ವಿಚಾರಕರು ಪರಿಶೀಲಿಸಬೇಕು ಎಂದರು.

ಕುಕನೂರು ತಾಲ್ಲೂಕಿನ ಮಂಡಲಗಿರಿ ಗ್ರಾಮ ಲೆಕ್ಕಾಧಿಕಾರಿ ಮಹೇಶಗೌಡ ಅವರು ಕ್ರಾಪ್ ಕಟ್ಟಿಂಗ್ ಎಕ್ಸ್ಪೆರಿಮೆಂಟ್ ಕುರಿತು ತರಬೇತಿ ನೀಡಿದರು. ಎಲ್ಲ ತಾಲ್ಲೂಕಿ ನತಹಶೀಲ್ದಾರರು, ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು
ಸೇರಿದಂತೆ ಮೂಲ ಕಾರ್ಯಕರ್ತರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.