ಗಂಗಾವತಿ: ತಾಲ್ಲೂಕಿನ ಮಲ್ಲಾಪುರ ಗ್ರಾಮದ ರೈತ ರಾಮಕೃಷ್ಣ ಅವರ ಜಮೀನಿನಲ್ಲಿ ಬೆಳೆದ ಭತ್ತದ ತಳಿ ಜಿ.ಎನ್. ವಿ-1109 ಕುರಿತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಕೆವಿಕೆ ಮುಖ್ಯಸ್ಥ ರಾಘವೇಂದ್ರ ಎಲಿಗಾರ ಮಾತನಾಡಿ,‘ಗಂಗಾವತಿ ಕೃಷಿ ಸಂಶೋಧನಾ ಕೇಂದ್ರ ಜಿಎನ್ವಿ- 1109 ಭತ್ತದ ತಳಿ ಹೊರತಂದಿದ್ದು, ಈ ತಳಿ ಸವಳು ಮಣ್ಣಿನಲ್ಲಿ ಕಡಿಮೆ ವೆಚ್ಚಕ್ಕೆ, ಅಧಿಕ ಇಳುವರಿ ನೀಡಲಿದೆ. ಸದ್ಯ ರೈತ ರಾಮಕೃಷ್ಣ ಬೆಳೆದಿದ್ದು, ಪ್ರಾತ್ಯಕ್ಷಿಕೆ ತೋರಿಸಲಾಗುತ್ತಿದೆ. ರೈತರು ಕೃಷಿಯಲ್ಲಿ ಹೊಸ ಅವಿಷ್ಕಾರ, ಹೊಸ ತಳಿ, ತಂತ್ರ ಜ್ಞಾನ ಅಳವಡಿಸಿಕೊಂಡಾಗ ಮಾತ್ರ ಆರ್ಥಿಕವಾಗಿಅಭಿವೃದ್ಧಿ ಹೊಂದಲು ಸಾಧ್ಯ. ಎಲ್ಲ ರೈತರು ಕೃಷಿ ಚಟುವಟಿಕೆಯಲ್ಲಿ ವಿಭಿನ್ನ ಮತ್ತು ಕಡಿಮೆ ರಾಸಾಯನಿಕ ಬಳಕೆಯ ಬೆಳೆಗಳನ್ನು ಬೆಳೆಯಬೇಕು’ ಎಂದರು.
ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಜೆ.ಎಂ.ನಿಡಗುಂದಿ ಮಾತನಾಡಿ,‘ಭತ್ತದ ಬೆಳೆಗೆ ಅತಿಯಾದ ನೀರು, ರಸಗೊಬ್ಬರ ಬಳಕೆಯಿಂದ ಭೂಮಿ ಸವಳಾಗಿ, ಉತ್ಪಾದಕತೆ ಕಡಿಮೆಯಾಗಿದೆ. ಸವಳು ಮಣ್ಣಿಗೆ ಸೂಕ್ತವಾದ ಬೆಳೆ ತೆಗೆಯಲು ಜಿಎನ್ವಿ-1109 ಭತ್ತದ ತಳಿ ಪರಿಚಯಿಸಲಾಗಿದೆ. ರೈತರು ಭೂಮಿ ಫಲವತ್ತತೆ ಕಾಪಾಡುವ ಜೊತೆಗೆ ವ್ಯವಸಾಯದಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಬೇಕು’ ಎಂದರು.
ಕೆವಿಕೆ ಸಸ್ಯರೋಗ ಶಾಸ್ತ್ರದ ವಿಜ್ಞಾನಿ ರೇವತಿ ಆರ್.ಎಂ,‘ಭತ್ತದಲ್ಲಿ ಬರುವ ಪ್ರಮುಖ ರೋಗ ನಿರ್ವಹಣೆ ಬಗ್ಗೆ, ಮಣ್ಣು ವಿಜ್ಞಾನ ವಿಭಾಗದ ತಾಂತ್ರಿಕ ಅಧಿಕಾರಿ ಶೃತಿ ಎನ್. ಮಣ್ಣು ಪರೀಕ್ಷೆ ಹಾಗೂ ಸವಳು ಮಣ್ಣಿನ ನಿರ್ವಹಣೆ ಕುರಿ ತುಮಾಹಿತಿ ನೀಡಿದರು. ವಿಜ್ಞಾನಿ ಜೆ.ರಾಧಾ ಮಾತನಾಡಿದರು.
ಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಛತ್ರಪ್ಪ ನಾಯಕ, ಮಲಿಯಪ್ಪ ಕಟ್ಟಿಮನಿ, ಪ್ರಗತಿಪರ ರೈತ ಪಂಪಾಪತಿ ಕಟ್ಟಿಮನಿ, ರಾಮಕೃಷ್ಣ ಕೆ, ಸಿದ್ಧಲಿಂಗಯ್ಯ, ಗಂಗಾವತಿ ಬೆಳೆ ಸಮೀಕ್ಷೆಗಾರ ಹನುಮಂತಪ್ಪ ಸೇರಿದಂತೆ 60ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.