ADVERTISEMENT

ಕುಷ್ಟಗಿ | ನೆಪ ಬೇಡ, ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ: ಕೃಷ್ಣಮೂರ್ತಿ

ಅಧಿಕಾರಿಗಳಿಗೆ ಚಾಟಿ ಬೀಸಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:50 IST
Last Updated 22 ಆಗಸ್ಟ್ 2025, 5:50 IST
<div class="paragraphs"><p><strong>ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು</strong></p></div>

ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು

   

ಕುಷ್ಟಗಿ: ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಕೇವಲ ಪ್ರಗತಿಯಲ್ಲಿವೆ ಎಂದು ನೆಪ ಹೇಳುವುದು ಬೇಡ ಎಂದು ಹೇಳುವ ಮೂಲಕ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಅಧಿಕಾರಿಗಳಿಗೆ ಪರೋಕ್ಷವಾಗಿ ಚಾಟಿ ಬೀಸಿದ ಪ್ರಸಂಗ ಬುಧವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಂಡುಬಂದಿತು.

‘ಈ ವರ್ಷದಲ್ಲಿ ಮಂಜೂರಾದ ಕಾಮಗಾರಿಗಳು ಎಷ್ಟು? ಅವುಗಳಲ್ಲಿ ಆರಂಭಗೊಳ್ಳದ ಕಾಮಗಾರಿಗಳು ಎಷ್ಟು? ಯಾವ ಕಾರಣಕ್ಕೆ ನಿಂತಿವೆ? ಎಂದು ಕೇಳಿದ್ದಕ್ಕೆ ಪಂಚಾಯಿತ್‌ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಂಜಿನಿಯರ್‌ರಿಂದ ಸಮರ್ಪಕ ಉತ್ತರ ಬಾರದ್ದಕೆ ಉಪ ಕಾರ್ಯದರ್ಶಿ ಅಸಮಾಧಾನ ವ್ಯಕ್ತಪಡಿಸಿದರು. ಶಾಲೆ, ಅಂಗನವಾಡಿ ಕಟ್ಟಡಗಳನ್ನು ಪೂರ್ಣಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ಶಾಲೆಗೆ ನೀರು: ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಜೆಜೆಎಂ ಮೂಲಕ ಕುಡಿಯುವ ನೀರು ಪೂರೈಸಬೇಕು. ತಾಲ್ಲೂಕಿನಲ್ಲಿ ಬಹುತೇಕ ಶಾಲೆಗಳಿಗೆ ಪೈಪ್‌ ಸಂಪರ್ಕ ಇಲ್ಲ. ಪೈಪ್ ಇರುವಲ್ಲಿ ನೀರು ಬರುತ್ತಿಲ್ಲ. ಹಾಗಾಗಿ ಇಂತಿಷ್ಟು ಗ್ರಾಮ, ಜನವಸತಿ ಪ್ರದೇಶಗಳು ಎಂದು ಶಾಖಾಧಿಕಾರಿಗಳಿಗೆ ಅಧಿಕಾರ ವ್ಯಾಪ್ತಿಯ ಹಂಚಿಕೆ ಮಾಡಿ ಮಾಹಿತಿ ಸಂಗ್ರಹಿಸಲು ಸೂಚಿಸಬೇಕು. ಸಂಬಂಧಿಸಿದ ಶಾಖಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಬೇಕು. ಈ ಯೋಜನೆಯಲ್ಲಿ ಒಟ್ಟು ಎಷ್ಟು ಹಳ್ಳಿಗಳಿಗೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿದೆ. ಆಗದಿರುವ ಕುರಿತು ಸ್ಪಷ್ಟ ವರದಿ ನೀಡಬೇಕು ಎಂದು ಆರ್‌ಡಬ್ಲ್ಯೂಎಸ್ ಎಂಜಿನಿಯರ್‌ಗೆ ಸೂಚಿಸಿದರು.

ಚರ್ಮಗಂಟು ರೋಗ: ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಜಾನುವಾರುಗಳಿಗೆ ಲಿಂಪಿಸ್ಕಿನ್‌ ರೋಗಬಾಧೆ ಕಾಡುತ್ತಿದ್ದರೂ ಪಶುಸಂಗೋಪನಾ ಇಲಾಖೆಯವರು ಮುತುವರ್ಜಿಹಿಸಿಲ್ಲ. ಜನರಲ್ಲಿ ಅರಿವು ಮೂಡಿಸಿಲ್ಲ ಎಂಬ ಬಗ್ಗೆ ದೂರು ಬಂದಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಈ ರೋಗಕ್ಕೆ ನಿರ್ದಿಷ್ಟ ಔಷಧಿ ಇಲ್ಲವಾದರೂ ನಿಯಂತ್ರಣಕ್ಕೆ ಬೇರೆ ಔಷಧಿಗಳನ್ನು ನೀಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿ ವಿವರಿಸಿದರು.

ಬೆಳೆ ಹಾನಿ: ತಾಲ್ಲೂಕಿನಲ್ಲಿ ಶೇ 100ರಷ್ಟು ಮುಂಗಾರು ಬೆಳೆ ಬಿತ್ತನೆಯಾಗಿದ್ದು, ನಿರಂತರವಾಗಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ 53 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳು ಹಾನಿಯಾಗಿವೆ. ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿ ಹೇಳಿದರು.

ದಾಳಿಂಬೆ, ತರಕಾರಿ ಬೆಳೆಗಳು ಮಳೆಯಿಂದ ಬಾಧೆಗೊಳಗಾಗಿವೆ ಎಂದು ಇಲಾಖೆಯವರು ಹೇಳಿದರು. ತೋಟಗಾರಿಕೆ ಇಲಾಖೆಯ ಯೋಜನೆಗಳ ಮಾಹಿತಿ ಕೆಲವೇ ಜನರಿಗೆ ಮಾತ್ರ ನೀಡುತ್ತಿದ್ದೀರಿ. ಉಳಿದ ರೈತರಿಗೆ ಮಾಹಿತಿ ನೀಡುವ ಪ್ರಯತ್ನ ನಡೆಸಿಲ್ಲ ಎಂದು ಉಪ ಕಾರ್ಯದರ್ಶಿ ಅತೃಪ್ತಿ ವ್ಯಕ್ತಪಡಿಸಿದರು.

13 ಡೆಂಗಿ ಪ್ರಕರಣಗಳು ಇದ್ದು, ಮಲೇರಿಯಾ ಪ್ರಕರಣ ಇಲ್ಲ. ಜುಮಲಾಪುರದಲ್ಲಿ ಪದೇ ಪದೇ ನೀರು ಪೂರೈಕೆ ಕೊಳವೆಗಳು ಒಡೆಯುತ್ತಿರುವುದರಿಂದ ಜನರಿಗೆ ವಿವಿಧ ಕಾಯಿಲೆಗಳು ಬಾಧಿಸುತ್ತಿವೆ ಎಂದು ಆರೋಗ್ಯ ಅಧಿಕಾರಿ ಹೇಳಿದರು. ಸುಪ್ರೀ ಕೋರ್ಟ್ ಆದೇಶದ ಪ್ರಕಾರ ಸುರಕ್ಷತೆ, ಇತರೆ (ಅಕ್ಯುಪೇಶನ್ ಸರ್ಟಿಫಿಕೆಟ್) ಪ್ರಮಾಣಪತ್ರ ಕಡ್ಡಾಯ. ಪ್ರಮಾಣಪತ್ರಗಳು ಇಲ್ಲದ ಯಾವುದೇ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ ಎಂದು ಜೆಸ್ಕಾಂ ಎಂಜಿನಿಯರ್‌ ಹೇಳಿದರು.

ಇತರೆ ಇಲಾಖೆಗಳ ಮೇಲಿನ ಪ್ರಗತಿ ಪರಿಶೀಲನೆ ಸಂಜೆ ನಂತರವೂ ಮುಂದುವರಿದಿತ್ತು. ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ ಸಭೆಯಲ್ಲಿದ್ದರು.

ಸರ್ಕಾರಿ ಭವನಕ್ಕೂ ಬಾಡಿಗೆ

ತಾಲ್ಲೂಕಿನಲ್ಲಿ 68 ಕಡೆಗಳಲ್ಲಿ ಸ್ವಂತ ಕಟ್ಟಡ ಇಲ್ಲದ ಕಾರಣ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ಕಟ್ಟಡ ಪೂರ್ಣಗೊಂಡಿದ್ದರೂ ಬಿಲ್‌ ಪಾವತಿಯಾಗಿಲ್ಲ ಎಂಬುದಕ್ಕೆ ಹಸ್ತಾಂತರಿಸಿಲ್ಲ ಎಂದು ಯಲ್ಲಮ್ಮ ಹಂಡಿ ಸಭೆಗೆ ವಿವರಿಸಿದರು.

ಶಾಖಾಪುರ ಗ್ರಾಮದಲ್ಲಿ ಸರ್ಕಾರದ ಸಮುದಾಯ ಭವನದಲ್ಲಿ ಕೇಂದ್ರ ನಡೆಸಬೇಕೆಂದರೆ ಅದಕ್ಕೂ ಬಾಡಿಗೆ ಕೊಡಬೇಕು ಎಂಬ ಬಗ್ಗೆ ಕೊರಡಕೇರಾ ಗ್ರಾ.ಪಂ ಸಭೆ ನಿರ್ಣಯಿಸಿದ ಬಗ್ಗೆ ಠರಾವು ಪ್ರತಿ ಕಳಿಸಿದೆ ಎಂದು ಹೇಳಿದರು. ಅದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಈ ಬಗ್ಗೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.