ಕೊಪ್ಪಳ: ಕವಿ ಸಿರಾಜ್ ಬಿಸರಳ್ಳಿ ಮತ್ತು ರಾಜಭಕ್ಷಿ ಅವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ನಾಗರಿಕರು ವಿರೋಧಿಸುವ ಸ್ವಾತಂತ್ರ್ಯ ಮತ್ತು ಹಕ್ಕನ್ನು ದಮನ ಮಾಡುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಹಾಗಾಗಿ ಸರ್ಕಾರಅವರ ವಿರುದ್ಧದಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತೀಯ ವಕೀಲರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಕುಮಾರ ಹೇಳಿದರು.
ನಗರದಲ್ಲಿ ಭಾನುವಾರಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪೊಲೀಸರು ಪಕ್ಷಗಳ ಹಾಗೂ ಸರ್ಕಾರದ ಒತ್ತಡಕ್ಕೆ ಮಣಿದು, ಸಿರಾಜ್ ಹಾಗೂ ರಾಜಾಭಕ್ಷಿ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಪೊಲೀಸರು ಸರ್ಕಾರದ ಪರವಾಗಿ ಕೆಲಸ ಮಾಡಬಾರದು. ಕಾನೂನಿನ ಪರವಾಗಿ ಕೆಲಸ ಮಾಡಬೇಕು. ಇದು ಒಬ್ಬ ವ್ಯಕ್ತಿಯ ಸಮಸ್ಯೆಯ ಅಲ್ಲ. ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಸಂಬಂಧಿಸಿದ ಸಮಸ್ಯೆ ಎಂದರು.
ಪೊಲೀಸರು ದೂರು ಬಂದಾಗ ಕೂಲಂಕುಶವಾಗಿ ಅಧ್ಯಯನ ಮಾಡಿ, ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಆದರೆ ಏಕಾಏಕಿ ಪ್ರಕರಣ ದಾಖಲಿಸಿಕೊಂಡಿರುವುದು ಕಾನೂನು ಬಾಹಿರ. ಈ ಮೂಲಕ ಕರ್ತವ್ಯ ನಿರ್ವಹಿಸುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೂಡಲೇ ಸರ್ಕಾರ ಸಿರಾಜ್ ಬಿಸರಳ್ಳಿ ಮತ್ತು ರಾಜಾಭಕ್ಷಿ ಅವರ ಮೇಲೆ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯಬೇಕು ಎಂದು ಒಕ್ಕೂಟದ ಪರವಾಗಿ ಆಗ್ರಹಿಸುತ್ತೇವೆ.
ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ಬೀದರ್ನ ಶಾಹೀನ್ ಪ್ರಕರಣದಲ್ಲಿ ಅವರಿಗೆ ಈಗಾಗಲೇ ಬೇಲ್ ಸಿಕ್ಕಿದೆ. ಅದೇ ರೀತಿಯಾಗಿ ನ್ಯಾಯಾಲಯ ಪ್ರಕರಣವನ್ನು ಕೂಲಂ ಕುಶವಾಗಿ ಅಧ್ಯಯನ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಸಿರಾಜ್ ಹಾಗೂ ರಾಜಾಭಕ್ಷಿ ಅವರ ಸಮ್ಮತಿಸಿದರೆ ಪೊಲೀಸರ ಮೇಲೆ ದೂರು ದಾಖಲಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.
ಆರ್.ಕೆ.ದೇಸಾಯಿ, ಜಗನ್ನಾಥ, ಅನೀಸ್ಪಾಚಾ, ವಿಜಯಲಕ್ಷ್ಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.