ಗಂಗಾವತಿ: ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳ ಪ್ರವೇಶ ಅನುಮತಿ ನಿರಾಕರಣೆ ಖಂಡಿಸಿ, ಗುರುವಾರ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಗಂಗಾವತಿ ತಾಲ್ಲೂಕಿಗೆ ಎಸ್.ಕೆ.ಎನ್ ಜಿ ಕಾಲೇಜು ಪ್ರತಿಷ್ಠಿತ ಕಾಲೇಜಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾಗುವ ಎಲ್ಲ ಮೂಲ ಸೌಕರ್ಯಗಳ ಇಲ್ಲಿ ಲಭ್ಯವಿವೆ. ಆದರೆ ಕಾಲೇಜಿನ ಪ್ರಾಚಾರ್ಯ ಮಾತ್ರ ಪದವಿ ಪ್ರವೇಶ ನಿರಾಕರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಪ್ರವೇಶ ವಿಷಯದಲ್ಲಿ ಕಳವಳ ಪಡುತ್ತಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ರಾಜ್ಯ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ನೀಡುವಂತೆ ಆದೇಶ ಹೊರಡಿಸಿದೆ. ಆದರೆ ಕಾಲೇಜಿನ ಪ್ರಾಚಾರ್ಯ ಮಾತ್ರ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ ವಿಭಾಗದ ಪ್ರವೇಶಕ್ಕೆ ನಿಗದಿತ ಸೀಟುಗಳ ಪಟ್ಟಿಯನ್ನು ಕಾಲೇಜಿನಲ್ಲಿ ಅಂಟಿಸಿ, ಪ್ರವೇಶ ನಿರಾಕರಿಸುತ್ತಿದ್ದಾರೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಜಿಗಳನ್ನು ನೀಡಿದ್ದು, ಇದೀಗ ಏಕಾಏಕಿ ಈಗ ಪ್ರವೇಶ ನೀಡವುದಿಲ್ಲ ನೀವು ಕನಕಗಿರಿ, ಶ್ರೀರಾಮನಗರ, ಹೊಸಬಂಡಿ ಹರ್ಲಾಪುರ ಕಾಲೇಜಿಗೆ ತೆರಳುವಂತೆ ಸೂಚಿಸುತ್ತಿದ್ದಾರೆ ಎಂದರು.
ನಿಗದಿತ ಸೀಟುಗಳ ಭರ್ತಿ ಕುರಿತು, ಯಾವ ಇಲಾಖೆಯು ಆದೇಶ ಹೊರಡಿಸಿಲ್ಲ, ಯಾವ ಸಿಡಿಸಿ ಸಭೆಯು ನಡೆಸದೆ, ಪ್ರಾಚಾರ್ಯರು ಏಕಗವಾಕ್ಷಿ ನಿರ್ಣಯ ತೆಗದುಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್ಸಿ, ಬಿಬಿಎಂ ವಿಭಾಗ ಪದವಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿ, ಬಿಎ ವಿದ್ಯಾರ್ಥಿಗಳ ಪ್ರವೇಶ ನಿರಾಕರಿಸಿ, ವಿದ್ಯಾರ್ಥಿಗಳ ವಿಷಯದಲ್ಲಿ ತಾರತಮ್ಯ ನೀತಿ ಅನುಸುತ್ತಿದ್ದಾರೆ. ಇದನ್ನು ವಿದ್ಯಾರ್ಥಿಗಳ ಸಂಘಟನೆ ಖಂಡಿಸಲಾಗುತ್ತದೆ ಎಂದು ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪ್ರಾಚಾರ್ಯ ಹೆಬಸೂರ, ಬಳ್ಳಾರಿ ವಿಶ್ವವಿದ್ಯಾಲಯ ಹೊರಡಿಸಿ ಆದೇಶದ ಮೇರೆಗೆ ನಿಗದಿತ ಸೀಟುಗಳ ಪ್ರವೇಶಕ್ಕೆ ಕ್ರಮ ಕೈಗೊಳ್ಳಾಗಿದೆ. ಆದರೆ ಪದವಿ ವಿದ್ಯಾರ್ಥಿಗಳ ಪ್ರವೇಶಕ್ಕೆ ನಿರಾಕರಣೆ ಮಾಡಿಲ್ಲ. ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಪದವಿ ಪ್ರವೇಶದ ಕುರಿತು ಸೋಮವಾರ ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರ ಜೊತೆ ಸಭೆ ನಡೆಸಿ, ಅಂತಿಮ ನಿರ್ಧಾರ ತಿಳಿಸಲಾಗುತ್ತದೆ ಎಂದರು.
ಸಂಘಟನೆಯ ಪದಾಧಿಕಾರಿಗಳಾದ ಗ್ಯಾನೇಶ ಕಡಗದ, ಶಿವುಕುಮಾರ, ಸೋಮನಾಥ, ಬಾಳಪ್ಪ, ಶರೀಫ್, ಶಿವು, ಟಿಪ್ಪು, ದೇವರಾಜ, ಯಮುನಾ, ದುರ್ಗಾ, ಸವಿತಾ, ಬಸವರಾಜ, ಭೀಮೇಶ, ಹನುಮೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.