ಕುಕನೂರು: ‘ಬೆದವಟ್ಟಿ ಹಿರೇಮಠದ ಶಿವ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗಪೂಜೆ ಮೂಲಕ ಸಮಾನತೆ ಸಂದೇಶ ಸಾರಿದ ಶ್ರೇಷ್ಠ ಶರಣರು’ ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬೆದವಟ್ಟಿ ಹಿರೇಮಠದ ಶಿವ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಗಳ ಪುಣ್ಯಾರಾಧನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವದಿಸಿದರು.
‘ಶ್ರೀಗಳು ತಮ್ಮ ಜೀವನವನ್ನೇ ಗಂಧದ ಕೊರಡಿನಂತೆ ತೇದು ಸಮಾಜಕ್ಕೆ ಸುಗಂಧ ಕೊಟ್ಟವರು’ ಎಂದರು.
‘ಅನೇಕ ಧಾರ್ಮಿಕ ಕಾರ್ಯ ಮಾಡಿದ್ದಲ್ಲದೆ, ಹಿಂದೆ ಪಂಚ ಪೀಠದ ಶ್ರೀಗಳನ್ನು ಕರೆಸಿ ಭವ್ಯ, ದಿವ್ಯ ಕಾರ್ಯಕ್ರಮ ಮಾಡಿ ಗ್ರಾಮದ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದವರು. ಭಕ್ತರಿಗೆ ದಾಸೋಹದಲ್ಲಿ ತುಪ್ಪದ ಊಟ ಹಾಕಿಸಿದ ಕೀರ್ತಿ ಅವರದಾಗಿತ್ತು. ನಾಡಿನ ಅನೇಕ ಮಠ ಮಾನ್ಯಗಳಿಗೆ ಮಾರ್ಗದರ್ಶಕರೂ ಆಗಿದ್ದರು’ ಎಂದರು.
ಯಲಬುರ್ಗಾ ಹಿರೇಮದ ಸಿದ್ದರಾಮೇಶ್ವರ ಸ್ವಾಮೀಜಿ, ಕುಕನೂರಿನ ಅನ್ನದಾನೀಶ್ವರ ಮಠದ ಮಹಾದೇವ ಸ್ವಾಮೀಜಿ, ಮಂಗಳೂರಿನ ಅರಳೆಲೆ ಮಠದ ಶ್ರೀಗಳು, ಚಳಗೇರಿ ಮಠದ ಶ್ರೀಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.