ಕೊಪ್ಪಳ: 'ಶಾಸಕ ಹಾಲಪ್ಪ ಆಚಾರ ಸಚಿವರಾದರೆ ನಮಗೆ ಸಂತೋಷ. ಅದು ಕೂಡಾ ನಮ್ಮದೇ ಪ್ರೊಡಕ್ಟ್' ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಯಲಬುರ್ಗಾದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷ್ಣಾ ‘ಬಿ’ ಸ್ಕೀಂ ವಸ್ತುಸ್ಥಿತಿ ಹಾಗೂ ಸತ್ಯಾಂಶ ಕುರಿತ ಕಿರುಹೊತ್ತಿಗೆ ಬಿಡುಗಡೆ ಕಾರ್ಯಕ್ರಮದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
'ಹಾಲಪ್ಪನಂತವರನ್ನು ನಾವು ತಯಾರು ಮಾಡಿದ್ದೇವೆ. ನಾಯಕರನ್ನು ತಯಾರು ಮಾಡಿದ ಪಕ್ಷ ನಮ್ಮ ಕಾಂಗ್ರೆಸ್. ಆದರೆ, ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಆತನ ಬಗ್ಗೆ ನನಗೆ ದ್ವೇಷವಿಲ್ಲ. ರಾಜಕಾರಣ ಮಾಡುವುದನ್ನು ನಮ್ಮಿಂದಲೇ ಕಲಿತಿದ್ದಾನೆ. 'ಮಂತ್ರಿ ಭಾಗ್ಯ' ಯಲಬುರ್ಗಾಕ್ಕೆ ಹೀಗೆ ಸಂಪ್ರದಾಯವಾಗಲಿ' ಎಂದು ಮಾರ್ಮಿಕವಾಗಿ ಹೇಳಿದರು.
ಬಿಜೆಪಿಯವರಿಗೆ ಸಮರ್ಥರನ್ನು ತಯಾರು ಮಾಡಲು ಆಗುವುದಿಲ್ಲ. ಹೀಗಾಗಿ ನಮ್ಮದೇ ಉತ್ಪನ್ನಗಳನ್ನು ಬಳಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬರೀ ಮಾತನಾಡುತ್ತಾರೆ. ಕೆಲಸ ಮಾಡುವುದಿಲ್ಲ. ಸಿದ್ದರಾಮಯ್ಯ ಮಾಡಿದ ಕೆಲಸಗಳನ್ನು ಇವರು ಮಾಡಲಿ ಎಂದು ಸಲಹೆ ನೀಡುತ್ತಿದ್ದೇನೆ ಎಂದರು.
ಶಾಸಕ ಹಾಲಪ್ಪ ಆಚಾರ ಅವರಿಗೆ ಸಚಿವ ಸ್ಥಾನ ದೊರೆಯುವುದು ಖಚಿತ ಎನ್ನಲಾಗುತ್ತಿದೆ. ಹಿಂದುಳಿದ ಈ ಭಾಗದಲ್ಲಿ ಪ್ರಾತಿನಿಧ್ಯ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ನಮ್ಮನ್ನು ನಾವು ಯಾರಿಗೂ ಹೋಲಿಸಿಕೊಳ್ಳುವುದಿಲ್ಲ. ನಮಗೆ ನಾವೇ ಸಾಟಿ ಎಂದುಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.