
ಗಂಗಾವತಿ: ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಆಂಜನೇಯನ ದೇವಸ್ಥಾನದ ನೂತನ ಮಹಾರಥೋತ್ಸವ ಲೋಕಾರ್ಪಣೆಗೊಳಿಸಿ ನಂತರ ರಥೋತ್ಸವ ನೆರವೇರಿಸಲಾಯಿತು.
ಮೂರು ದಿನಗಳ ಕಾಲ ನಡೆದ ನೂತನ ಮಹಾರಥೋತ್ಸವ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಡಿ.1ರಂದು ಬೆಳಿಗ್ಗೆ ಸುಮಂಗಲೆಯರೊಂದಿಗೆ ಕಳಸ-ಕುಂಭಗಳ ಮೂಲಕ ರಾಜಬೀದಿಯಲ್ಲಿ ಮೆರವಣಿಗೆ ನಡೆಸಿ ಗಂಗೆ ಪೂಜೆ ಮಾಡಲಾಯಿತು.
ನಂತರ ದೇವರಿಗೆ ಫಲ ಪ್ರಾರ್ಥನೆ, ಗಣಪತಿ ಪೂಜೆ, ದೇವನಾಂದಿ, ಅಂಕುರಾರ್ಪಣೆ, ಕಂಕಣಧಾರಣೆ, ಆಂಜನೇಯನ ಮೂರ್ತಿಗೆ ವಿಗ್ರಹ ಶುದ್ಧಿ, ಪಂಚಾಮೃತ ಅಭಿಷೇಕ, ಕಳಸ ಸ್ಥಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಡಿ.2ರಂದು ಆಂಜನೇಯನಿಗೆ ಪಂಚಾಮೃತ ಅಭಿಷೇಕ, ಕಲಾತ್ಮಕ ಹೋಮ, ಕುಂಭಾಭಿಷೇಕ, ಅಲಂಕಾರ, ಮಹಾಪೂಜೆ, ಆಂಜನೇಯನ ಮೂಲಮಂತ್ರ ಹೋಮ, ಪವಮಾನ ಹೋಮ, ರಾಮತಾರಕ ಹೋಮ, ಸಂಜೆ ಉಚ್ಚೆಯ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಿತು.
ಕೊನೆಯ ದಿನ ಸಂಜೆ ಗ್ರಾಮದಲ್ಲಿ ನೂತನ ಮಹಾರಥೋತ್ಸವಕ್ಕೆ ಚಾಲನೆ ನೀಡಿ, ಆಂಜನೇಯನ ಸ್ವಾಮಿದೇವ ಸ್ಥಾನದಿಂದ ಬಸವಣ್ಣ ಗುಡಿ ಪಾದಗಟ್ಟೆವರೆಗೆ ರಥ ಎಳೆಯಲಾಯಿತು. ಭಕ್ತರು ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಗ್ರಾಮಸ್ಥರು ಕುಟುಂಬದ ಸಮೇತ ಆಂಜನೇಯನ ದೇವ ಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದು, ರಥಕ್ಕೆ ಪೂಜೆ ಸಲ್ಲಿಸಿದರು. ಯುವಕರು, ಮಹಿಳೆಯರು, ಚಿಣ್ಣರರು ಜಾತ್ರೆ ಯಲ್ಲಿ ಜೋಗ್ಯಾರ ಸಾಮಾನುಗಳು ಖರೀದಿಸಿ, ಸಂಭ್ರಮಿಸಿದರು.
ಶಾಸಕ ಜಿ.ಜನಾರ್ದನರೆಡ್ಡಿ, ಸಮಾಜ ಸೇವಕ ಮಂಜುನಾಥ ಕಲಾಲ್, ಆನಂದ.ಬಿ ಪಾಟೀಲ, ಕೆ.ಲಿಂಗಜ್ಜ, ಅಂಜನಿಗೌಡ ಕೃಷ್ಣ ಪಾಟೀಲ, ಸುಂಕಪ್ಪ ಬೋವಿ, ನಾಗಪ್ಪ ಗೂಗಿಬಂಡಿ ಸುಳೇಕಲ್ ಯಲ್ಲಪ್ಪ, ಮಾನಪ್ಪ, ಯಮನಪ್ಪ, ಪಂಪಾಪತಿ ವೆಂಕೋ, ನರಹರಿಶೆಟ್ಟಿ, ಅಯ್ಯನಗೌಡ ಪಾಟೀಲ, ಬಸನಗೌಡ ಪಾಟೀಲ, ಪರಸಪ್ಪ ಉಪ್ಪಾರ, ಗಣೇಶ ಲಮಾಣಿ, ರಾಮಕೃಷ್ಣ ರಾಂಪುರ, ವೆಂಕಟೇಶ, ಶಂಕರ, ಮುದಿಗೌಡ, ಮಂಜುನಾಥ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.