ADVERTISEMENT

ಕಲ್ಲೂರು: ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 14:02 IST
Last Updated 24 ಮೇ 2024, 14:02 IST
ಯಲಬುರ್ಗಾ ತಾಲ್ಲೂಕು ಕಲ್ಲೂರು ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಪಿಡಿಒ ರೇಣುಕಾ ಠಂಕದ ಮಾತನಾಡಿದರು
ಯಲಬುರ್ಗಾ ತಾಲ್ಲೂಕು ಕಲ್ಲೂರು ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಪಿಡಿಒ ರೇಣುಕಾ ಠಂಕದ ಮಾತನಾಡಿದರು   

ಯಲಬುರ್ಗಾ: ಕೂಲಿ ಕಾರ್ಮಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳ ನಡುವೆ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಹಾಗೆಯೇ ವಿಶ್ರಾಂತಿಯೊಂದಿಗೆ ಕೆಲಸ ಮಾಡುವುದು ಅವಶ್ಯಕ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಠಂಕದ ಹೇಳಿದರು.

ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಸ್ಥಳದಲ್ಲಿ ನಡೆದ ಆರೋಗ್ಯ ತಪಾಸಣೆ ಹಾಗೂ ಎಚ್‍ಐವಿ ಏಡ್ಸ್ ಕುರಿತ ಅರಿವು ಕಾರ್ಯಕ್ರಮದಲ್ಲಿ  ಮಾತನಾಡಿದರು.

ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಮಹಿಳೆಯರು, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತೀರಾ ಕಡಿಮೆ. ಇದರಿಂದ ಬಹುಬೇಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕೆಲಸದ ಮಧ್ಯೆ ವಿಶ್ರಾಂತಿ ಪಡೆಯುವುದು, ಆಗಾಗ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಹೀಗೆ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಂಡು ದೈನಂದಿನ ಜೀವನವನ್ನು ನಡೆಸುವುದರ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು ಎಂದು ಸಲಹೆ ನೀಡಿದರು.

ADVERTISEMENT

ಐಸಿಟಿಸಿ ಆಪ್ತ ಸಮಾಲೋಚಕ ಕಾಳಪ್ಪ ಬಡಿಗೇರ ಮಾತನಾಡಿ,   ಸುರಕ್ಷಿತ ಲೈಂಗಿಕತೆಯಿಂದ ಕಾಯಿಲೆಯಿಂದ ದೂರ ಉಳಿಯಬಹುದಾಗಿದೆ. ಹಲವು ಕಾರಣಗಳಿಂದ ಸೋಂಕು ತಗಲುವ ಸಾಧ್ಯತೆಗಳಿವೆ. ಒಂದು ವೇಳೆ ಸೋಂಕು ತಗಲಿದ್ದಲ್ಲಿ ಯಾವುದೇ ರೀತಿಯ ಭಯ ಅಥವಾ ಆತಂಕ ಪಡದೇ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡಿಸುವುದು, ಗುಣಮಟ್ಟದ ಆಹಾರ ಸೇವನೆ ಮತ್ತು ಹರಡದಂತೆ ಎಚ್ಚರವಹಿಸವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಯ್ಯ ಗುರುಮಠ, ಉಪಾಧ್ಯಕ್ಷ ರಾಮಪ್ಪ ಪೂಜಾರ, ತಾಂತ್ರಿಕ ಸಹಾಯಕ ಸಂಗಮೇಶ ಜಡಿಮಠ, ಗ್ರಾಮ ಆರೋಗ್ಯ ಅಧಿಕಾರಿ ಶ್ರೀದೇವಿ, ಹೊಸ ಬೆಳಕು ಸಂಸ್ಥೆಯ ಸಂಯೋಜಕ, ಕಾಯಕ ಬಂಧುಗಳು, ಆಶಾ ಕಾರ್ಯಕರ್ತೆಯರು, ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.