ADVERTISEMENT

ಕೊಪ್ಪಳ | ಬಿರುಸಿನ ಮಳೆಗೆ ನೆಲಕ್ಕೊರಗಿದ 3,724 ಹೆಕ್ಟೇರ್ ಭತ್ತ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 13:03 IST
Last Updated 9 ನವೆಂಬರ್ 2023, 13:03 IST
   

ಕೊಪ್ಪಳ: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಬೆಳಗಿನ ಜಾವದ ತನಕ ಸುರಿದ ಬಿರುಸಿನ ಮಳೆಗೆ 3,724 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಳಾಗಿದೆ.

ರಾಜ್ಯದ ಭತ್ತದ ಕಣಜ ಎನಿಸಿರುವ ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿ, ಹಣವಾಳ, ಹೊಸಕೇರಾ, ಢಣಾಪುರ, ಶ್ರೀರಾಮನಗರ ಭಾಗದಲ್ಲಿನ ಭತ್ತದ ಬೆಳೆಗಳು ನೆಲಕ್ಕೆ ಹಾಸಿಕೊಂಡು, ಕಟಾವಿಗೆ ಬಾರದಂತಾಗಿವೆ.

ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲ್ಲೂಕುಗಳಲ್ಲಿ ಒಟ್ಟು 70 ಸಾವಿರ ಹೆಕ್ಟೇರ್‌ನಲ್ಲಿ ಈ ಸಲ ಭತ್ತ ಬಿತ್ತನೆ ಮಾಡಲಾಗಿದೆ. ಬಹುತೇಕ ಕಡೆ ಭತ್ತ ಈಗ ಕಟಾವಿಗೆ ಬಂದಿತ್ತು. ಜೋರು ಗಾಳಿ, ಗುಡುಗಿನ ಆರ್ಭಟದೊಂದಿಗೆ ಸುರಿದ ಮಳೆಯಿಂದಾಗಿ ಬೆಳೆ ಹಾಳಾಗಿದೆ.

ADVERTISEMENT

ಗಂಗಾವತಿ ತಾಲ್ಲೂಕಿನ ಗಂಗಾವತಿ, ಮರಳಿ, ವೆಂಕಟಗಿರಿ ಗ್ರಾಮಗಳಲ್ಲಿ 642.02 ಹೆಕ್ಟೇರ್‌, ಕಾರಟಗಿ ತಾಲ್ಲೂಕಿನ ಕಾರಟಗಿ ಮತ್ತು ಸಿದ್ದಾಪುರದಲ್ಲಿ 3,028 ಹೆಕ್ಟೇರ್‌, ಕನಕಗಿರ ತಾಲ್ಲೂಕಿನ ನವಲಿಯಲ್ಲಿ 52.08 ಹೆಕ್ಟೇರ್‌ ಬೆಳೆ ಹಾಳಾಗಿದೆ ಎಂದು ಕೃಷಿ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.

ಸೋನಾಮಸೂರಿ, ಕಾವೇರಿ ಸೋನಾ, ಆರ್. ಎನ್.ಆರ್, ಬಿಪಿಟಿ ಸೋನಾ, ನೆಲ್ಲೂರು ಸೋನಾ ಹೀಗೆ ಅನೇಕ ತಳಿಗಳನ್ನು ಬೆಳೆಯಲಾಗಿದೆ.

‘ಎತ್ತರವಾಗಿ ಬೆಳೆಯುವ ಆರ್‌ಎನ್‌ಆರ್‌ ತಳಿ ಹೆಚ್ಚು ಹಾಳಾಗಿದೆ. ಯೂರಿಯಾ ಗೊಬ್ಬರ ವಿಪರೀತವಾಗಿ ಬಳಸಿ ಬೆಳೆ ಬೆಳೆದ ಕಾಂಡ ಬೇಗನೆ ಮೆತ್ತಗಾಗುತ್ತದೆ. ಹೀಗೆ ಮಾಡಿದವರ ಫಸಲು ಮಳೆಯಿಂದ ಹಾಳಾಗಿದೆ. ಮುಂದಿನ ಎರಡ್ಮೂರು ದಿನ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.