ADVERTISEMENT

ಸಾವಯವ ದೃಢೀಕರಣದಿಂದ ಅಧಿಕ ಆದಾಯ: ಉಕ್ಕುಂದ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 15:00 IST
Last Updated 28 ಫೆಬ್ರುವರಿ 2024, 15:00 IST
ಕೊಪ್ಪಳದಲ್ಲಿ ಬುಧವಾರ ಕೊಪ್ಪಳ ಸಾವಯವ ಕೃಷಿಕರ ಬಳಗ ಆಯೋಜಿಸಿದ್ದ ಸಾವಯವ ದೃಢೀಕರಣ ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿದರು
ಕೊಪ್ಪಳದಲ್ಲಿ ಬುಧವಾರ ಕೊಪ್ಪಳ ಸಾವಯವ ಕೃಷಿಕರ ಬಳಗ ಆಯೋಜಿಸಿದ್ದ ಸಾವಯವ ದೃಢೀಕರಣ ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿದರು   

ಕೊಪ್ಪಳ: ‘ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ ಸಾವಯವ ದೃಢೀಕರಣ ಮಾಡಿದರೆ ಆ ಪದಾರ್ಥದ ಮೌಲ್ಯ ಇನ್ನಷ್ಟು ಅಧಿಕವಾಗಲಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಅಭಿಪ್ರಾಯಪಟ್ಟರು.

ಇಲ್ಲಿನ ತೋಟಗಾರಿಕೆ ಇಲಾಖೆ ಸಭಾಂಗಣದಲ್ಲಿ ಸಾವಯವ ಕೃಷಿಕರಿಗೆ ಬುಧವಾರ ಏರ್ಪಡಿಸಿದ್ದ 'ಸಾವಯವ ದೃಢೀಕರಣ' ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು ‘ರೈತರ ಆರ್ಥಿಕತೆಯನ್ನು ಉತ್ತಮಗೊಳಿಸಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಅದರಲ್ಲೂ ಸಾವಯವ ಕೃಷಿಕರು ನಿಸರ್ಗಸ್ನೇಹಿ ಪದ್ಧತಿ ಜತೆಗೆ ದೃಢೀಕರಣ ಯೋಜನೆಗೆ ಒಳಪಟ್ಟರೆ, ಅವರ ಆದಾಯ ಮತ್ತಷ್ಟು ಹೆಚ್ಚಾಗಲಿದೆ’ ಎಂದರು.

ಸಹಜ ಸಮೃದ್ಧ ಸಾವಯವ ಉತ್ಪಾದಕರ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮೇಶ್ ಬಿ. ಮಾತನಾಡಿ ‘ಸಾವಯವ ಪ್ರಮಾಣೀಕರಣದ ಬಗ್ಗೆ ಹೆಚ್ಚು ರೈತರಲ್ಲಿ ಜಾಗೃತಿ ಇಲ್ಲ. ಕೃಷಿಕರಿಗೆ ಮಾಹಿತಿ ಕೊಡುವ ಜತೆಗೆ, ಅವರ ಜಮೀನನ್ನು ಸಾವಯವ ಪ್ರಕ್ರಿಯೆಗೆ ಒಳಪಡಿಸುವ ಉಸ್ತುವಾರಿಯನ್ನು ತಮ್ಮ ರೈತ ಉತ್ಪಾದಕ ಕಂಪನಿ ವಹಿಸಿಕೊಂಡಿದೆ’ ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಪ್ಪಳ ಸಾವಯವ ಕೃಷಿಕರ ಬಳಗದ ಅಧ್ಯಕ್ಷ ಶ್ರೀಪಾದರಾಜ ಮುರಡಿ, 'ಬೆಳೆಯುವ ಜತೆಗೆ ಮಾರುಕಟ್ಟೆ ಜ್ಞಾನವೂ ರೈತರಿಗೆ ಇರಬೇಕು. ಮಾರುಕಟ್ಟೆಯನ್ನು ಸದ್ಬಳಕೆ ಮಾಡಿಕೊಳ್ಳಲು ಸಾವಯವ ಪ್ರಮಾಣೀಕರಣ ಅತ್ಯುತ್ತಮ ವಿಧಾನ' ಎಂದರು.

ಸಾವಯವ ಕೃಷಿಕ ಶಂಕರ ರಡ್ಡಿ ಕಾಟ್ರಳ್ಳಿ, ಕಿರಣ್ ಕುಮಾರ್ ಶೆಡ್ಡೆ, ಶ್ರೀನಾಥ ತೂನ, ಉದಯ ರಾಯರಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕೊಪ್ಪಳ,  ವಿಜಯಪುರ, ಬಳ್ಳಾರಿ, ದಾವಣಗೆರೆ, ಗದಗ, ಬಾಗಲಕೋಟೆ ಜಿಲ್ಲೆಗಳ ಸಾವಯವ ಕೃಷಿಕರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.