
ಹುಮನಾಬಾದ್: ಮತಕ್ಷೇತ್ರದ ಜನ ಈ ಬಾರಿ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಬಜೆಟ್ನಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಪೂರಕ ಅನುದಾನ ಸಿಗಬಹುದಾ? ಎಂದು ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.
ಹುಮನಾಬಾದ್ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕೆಲ ರಾಸಾಯನಿಕ ಕಾರ್ಖಾನೆಗಳಿಂದ ವಿಷಪೂರಿತ ಗಾಳಿ ಮತ್ತು ತ್ಯಾಜ್ಯದಿಂದ ಇಲ್ಲಿನ ಜನರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಹುಡುಕುವ ಯೋಜನೆ ರೂಪಗೊಳ್ಳಬಹುದೆ? ಎಂದು ಜನ ಕಾಯುತ್ತಿದ್ದಾರೆ.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಆರಂಭಿಸುವುದು. ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ತಾಲ್ಲೂಕಿನ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ರೈತರು ದಿನಕಳೆಯುತ್ತಿದ್ದಾರೆ.
ಬಿಎಸ್ಎಸ್ಕೆ ಕಾರ್ಖಾನೆ ರಾಜ್ಯದಲ್ಲೇ ಅತ್ಯಂತ ಹಳೇ ಕಾರ್ಖಾನೆ ಜೊತೆಗೆ ಬೀದರ್ ಜಿಲ್ಲೆಯ ರೈತರ ಜೀವನಾಡಿ. 25 ಸಾವಿರಕ್ಕೂ ಹೆಚ್ಚು ಸದಸ್ಯರು, 600ಕ್ಕೂ ಹೆಚ್ಚು ಕಾರ್ಮಿಕರು, 10 ಸಾವಿರ ಕೃಷಿ ಕಾರ್ಮಿಕರು ಈ ಕಾರ್ಖಾನೆಯ ಮೇಲೆ ಅವಲಂಬಿತರಾಗಿದ್ದಾರೆ.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಎಲ್ಆರ್ಒಟಿ ಆಧಾರದ ಮೇಲೆ ಖಾಸಗಿ ಅವರಿಗೆ ಲೀಜ್ ನೀಡಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ಅಧ್ಯಕ್ಷ ಸುಭಾಷ್ ಕಲ್ಲೂರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿಯಾಗಿ ಈ ಹಿಂದೆ ಮನವಿ ಕೂಡ ಸಲ್ಲಿಸಿದ್ದಾರೆ. ಹೀಗಾಗಿ ಬಜೆಟ್ನಲ್ಲಿ ಕಾರ್ಖಾನೆಗೆ ಅನುದಾನ ದೊರೆಯುವ ಸಾಧ್ಯತೆಗಳು ಇವೆ ಎನ್ನಾತ್ತಾರೆ ಇಲ್ಲಿಯ ರೈತರು.
ಪಟ್ಟಣದ ಹೊರವಲಯದ ಕೆಲ ಕೆಮಿಕಲ್ ಕಾರ್ಖಾನೆಗಳಿಂದ ಬರುವ ವಾಸನೆ ಹಾಗೂ ತ್ಯಾಜ್ಯಗಳಿಂದ ಮಾಣಿಕ್ ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಜನ, ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಸಾಮಾನ್ಯವಾಗಿದೆ. ಕೆಲ ಕೆಮಿಕಲ್ ಕಾರ್ಖಾನೆಗಳು ವಿಷಪೂರಿತ ತ್ಯಾಜ್ಯವನ್ನು ಹಳ್ಳ ಮತ್ತು ಅಕ್ಕಪಕ್ಕದ ಹೂಲಗಳ ಬದುಗಳಲ್ಲಿ ಬಿಡುತ್ತಿದ್ದಾರೆ. ಇದರಿಂದಾಗಿ ವಾಯು ಹಾಗೂ ನೀರಿನಲ್ಲಿ ವಿಷಪೂರಿತ ತ್ಯಾಜ್ಯ ಮಿಶ್ರಣಗೊಂಡು ಸಮಸ್ಯೆ ಉಲ್ಬಣಗೊಂಡಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ತಾಲ್ಲೂಕು ಕೇಂದ್ರದಿಂದ ಕೇವಲ 2ಕಿ.ಮೀ ಅಂತರದಲ್ಲಿರುವ ಮಾಣಿಕ್ ನಗರ, ಗಡವಂತಿ, ಮೋಳಕೇರಾ, ಬಸಂತಪುರ್ ಗ್ರಾಮಗಳ ಸಾಕಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅನೇಕ ದನ ಕರುಗಳು ಸೇರಿದಂತೆ ಜೀವ ಜಂತುಗಳು ಮೃತಪಟ್ಟಿವೆ ಎನ್ನುತ್ತಾರೆ ಈ ಗ್ರಾಮಸ್ಥರು.
Quote - ಚಿಟಗುಪ್ಪ ಪಟ್ಟಣದಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಆರಂಭಿಸುವುದಕ್ಕೆ ಅಗತ್ಯ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇನೆ ಡಾ.ಸಿದ್ದಲಿಂಗಪ್ಪ ಪಾಟೀಲ ಶಾಸಕ
ಶಾಸಕರು ಏನಂತಾರೆ
ಹುಮನಾಬಾದ್ ಪಟ್ಟಣದಿಂದ ಮೂರು ರಾಷ್ಟೀಯ ಹೆದ್ದಾರಿ ಹಾದುಹೋಗಿವೆ. ಈ ಹೆದ್ದಾರಿಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಲ್ಲೆ ಇವೆ.
ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸೋಲಾಪುರ ಮತ್ತು ಹೈದ್ರಾಬಾದ್ಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ಅಷ್ಟೊಂದು ದೂರ ಪ್ರಯಾಣಿಸುವುದರ ಒಳಗಾಗಿ ಅದೆಷ್ಟೋ ಗಾಯಾಳುಗಳು ಪ್ರಾಣ ಕಳೆದುಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಹುಮನಾಬಾದ್ ರಾಷ್ಟೀಯ ಹೆದ್ದಾರಿ ಮೇಲೆ ಒಂದು ಟ್ರಾಮಾ ಕೇರ್ ಸೆಂಟರ್ (ಅಪಘಾತ ವೈದ್ಯಕೀಯ ಸೇವಾಕೇಂದ್ರ) ಆರಂಭಿಸುವುದಕ್ಕೆ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಶಾಸಕ ಡಾ ಸಿದ್ದಲಿಂಗಪ್ಪ ಪಾಟೀಲ ಹೇಳಿದರು. ಹುಮನಾಬಾದ್ ತಾಲ್ಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆಗಳು ಇಲ್ಲ ಈ ಭಾಗದ ರೈತರು ನೀರಾವರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಈ ರೈತರ ಅನುಕೂಲಕ್ಕಾಗಿ ಏತ ನೀರಾವರಿ ಯೋಜನೆಗೆ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಆರಂಭವಾಗದ ಕಚೇರಿಗಳು ಹುಮನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಚಿಟಗುಪ್ಪ ಪಟ್ಟಣ ತಾಲ್ಲೂಕು ಕೇಂದ್ರವಾಗಿ ಹತ್ತು ವರ್ಷ ಕಳೆದರೂ ಆಡಳಿತಾತ್ಮಕ ಮೂಲಸೌಕರ್ಯ ಸಂಪೂರ್ಣ ಕಾರ್ಯಾರಂಭವಾಗಿಲ್ಲ. ಜನರು ಇನ್ನೂ ಹಳೆಯ ತಾಲ್ಲೂಕನ್ನೆ ಅವಲಂಬಿಸಿದ್ದಾರೆ. ಸುತ್ತಮುತ್ತಲಿನ ಸುಮಾರು 110ಕ್ಕೂ ಹೆಚ್ಚು ಹಳ್ಳಿ ಮತ್ತು ತಾಂಡಾಗಳನ್ನು ಒಳಗೊಂಡ ಹೊಸ ತಾಲ್ಲೂಕು ಕೇಂದ್ರವಾಗಿ ಘೋಷಿತವಾದ ಚಿಟಗುಪ್ಪ ಪೂರ್ಣ ಪ್ರಮಾಣದ ಆಡಳಿತ ಕಚೇರಿಗಳ ಆರಂಭವಾಗದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಪ್ರಸ್ತುತ ತಾಲ್ಲೂಕು ಕೇಂದ್ರದಲ್ಲಿ ತಹಶೀಲ್ದಾರ್ ಕಚೇರಿ ತಾಲ್ಲೂಕು ಪಂಚಾಯಿತಿ ಕಚೇರಿ ಹೊರತುಪಡಿಸಿ ತಾಲ್ಲೂಕಿಗೆ ಬೇಕಾದ ಉಪ ನೋಂದಣಿ ಕಚೇರಿ ಸೇರಿ ಇನ್ನೂ 30ಕ್ಕೂ ಹೆಚ್ಚು ಇಲಾಖೆಗಳ ಕಚೇರಿಗಳು ಕಾರ್ಯಾರಂಭವಾಗಬೇಕಿದೆ. ವಿವಿಧ ಪ್ರಮಾಣಪತ್ರಗಳು ಸರ್ಕಾರಿ ಸೇವೆಗಳು ಹಾಗೂ ಆಡಳಿತಾತ್ಮಕ ಕೆಲಸಗಳಿಗಾಗಿ ಜನರು ಹಳೆಯ ತಾಲ್ಲೂಕುಗಳಿಗೆ ತೆರಳಬೇಕಾದ ಪರಿಸ್ಥಿತಿ ಮುಂದುವರಿದಿದೆ. ಕ್ಷೇತ್ರದ ಶಾಸಕರಿಗೂ ಮೂರು ತಾಲ್ಲೂಕುಗಳ ಅಧಿಕಾರಿಗಳ ಸಮನ್ವಯ ಸಾಧಿಸುವುದು ಸವಾಲಾಗಿದೆ. ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮೂರು ತಾಲ್ಲೂಕುಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ದಿನಗಟ್ಟಲೇ ಸಭೆ ಮಾಡಬೇಕಾಗಿದೆ. ಇದು ಅಭಿವೃದ್ಧಿ ಕಾರ್ಯಗಳು ನಿಧಾನವಾಗಿ ಸಾಗುತ್ತಿರುವುದಕ್ಕೆ ನಿದರ್ಶನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.