
ಗಂಗಾವತಿ: ‘ಕಲ್ಯಾಣ ಕರ್ನಾಟಕ ಭಾಗದ ಹಳ್ಳಿಗಳಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಹಲವು ಬಡ ಕುಟುಂಬಗಳಲ್ಲಿ ಯುವಕರು, ಹಿರಿಯರು, ವೃದ್ಧರು ಮದ್ಯಕ್ಕೆ ದಾಸರಾಗಿ, ಸಂಸಾರ ಬೀದಿಗೆ ತಂದುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಜಾಗೃತಿ ಮೂಡಿಸಿ, ಮದ್ಯ ಮುಕ್ತ ಕಲ್ಯಾಣ ಕರ್ನಾಟಕ ನಿರ್ಮಾಣಕ್ಕೆ ಕೆ.ಆರ್.ಎಸ್ ಪಕ್ಷ ಶ್ರಮಿಸಲಿದೆ’ ಎಂದು ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.
ತಾಲ್ಲೂಕಿನ ಬಸಾಪಟ್ಟಣ ಗ್ರಾಮದ ಗಾಂಧಿ ವೃತ್ತದ ಬಳಿ ಬುಧವಾರ ನಡೆದ ಅರಿವಿನ ಕ್ರಾಂತಿ (ಕುಡಿತ ಬಿಡಿಸಿ ಸಂಸಾರ ಉಳಿಸಿ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಯಾವ ಜನಪರ ಯೋಜನೆಗಳನ್ನು ಹೊರತರುತ್ತಿಲ್ಲ. ಬದಲಾಗಿ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡಿದಂತೆ ಕಾಣುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸ್, ಅಬಕಾರಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಶಾ ವೀರೇಶ ಮಾತನಾಡಿ, ‘ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕರ್ತವ್ಯ ಲೋಪ, ನಿರ್ಲಕ್ಷ್ಯ, ಅವ್ಯವಹಾರದಲ್ಲಿನ ಶಾಮೀಲಿನಿಂದ ಹಳ್ಳಿ, ಅಂಗಡಿ, ಬೀದಿ, ಗುಡಿಸಲುಗಳಲ್ಲಿ, ಕೇರಿ, ಓಣಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಆದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಅಂಬೇಡ್ಕರ್ ವೃತ್ತಕ್ಕೆ ತೆರಳಿ, ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರಹಾಕಿ, ನಂತರ ಗಾಂಧಿ ವೃತ್ತದ ಮೂಲಕ ಬಸಾಪಟ್ಟಣ ಗ್ರಾಮಕ್ಕೆ ತೆರಳಿದರು.
ಮಹಿಳಾ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ದೀಪಾ ಮುನ್ನೂರು, ರಾಜ್ಯ ಕಾರ್ಯದರ್ಶಿ ರಮೇಶಗೌಡ, ಮಹಿಳಾ ಘಟಕದ ಉಪಾಧ್ಯಕ್ಷೆ ಶಕುಂತಲಾ, ನಿರುಪಾದಿ ಕೆ.ಗೋಮರ್ಸಿ, ಕನಕಪ್ಪ ಉಡೆಜಾಲಿ, ವೆಂಕಟೇಶ, ಅನುಸ್ವಾಮಿ, ಶರಣಪ್ಪ ದೊಡ್ಮನಿ, ನಿರ್ಮಲಾ, ಸಿದ್ದಮ್ಮ, ಗಣೇಶ ಅಮೃತ, ಗಣೇಶ ಸಾರಂಗಿ, ಮೈನುದ್ದೀನ್, ನಾಗರಾಜ ಕಮ್ಮಾರ, ಬಸವರಾಜ, ಶಾಮೀದ ಅಲಿ, ನಾಗಪ್ಪ ಕಂಬಳಿ, ವೀರೇಶ ಉಡಮಕಲ, ಮೆಹಬೂಬ, ಅಹಮದ, ಮುದಿಯಪ್ಪ, ಯಾಕೂಬ, ಮಹಮ್ಮದ್, ಮೇರಿ, ಮಮತಾ, ರೇಖಾ, ತರಂಗಿಣಿ, ಪುಷ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.