ಕಾರಟಗಿ: ಅವಿಭಜಿತ ಗಂಗಾವತಿ ತಾಲ್ಲೂಕಿನ ವಿವಿಧ ಬಾರ್ಗಳಿಂದ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಪಕ್ಕದ ಆಂಧ್ರ ಪ್ರದೇಶಕ್ಕೆ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿರುವ
ಪಟ್ಟಣದ ಪೊಲೀಸರು ₹1. 61 ಲಕ್ಷ ಬೆಲೆ ಬಾಳುವ 48 ಬಾಕ್ಸ್ ಮದ್ಯವನ್ನು ಮತ್ತು ವಾಹನದ ಚಾಲಕನನ್ನು ಬಂಧಿಸಿದ ಘಟನೆ ಸೋಮವಾರ ಜರುಗಿದೆ.
ಕಾರಟಗಿ, ಮರ್ಲಾನಹಳ್ಳಿ, ಸಿದ್ದಾಪುರ, ಗಂಗಾವತಿ, ಶ್ರೀರಾಮನಗರದ ಸಹಿತ ವಿವಿಧೆಡೆಯ ಪ್ರವಾಸೋದ್ಯಮ ಇಲಾಖೆಯಯಡಿ ಪರವಾನಗಿ ಹೊಂದಿರುವ ಬಾರ್ ಮತ್ತು ಮದ್ಯದ
ಅಂಗಡಿಗಳಿಂದ ಮದ್ಯದ ಬಾಟಲಿಗಳನ್ನು ಸಗಟು ರೂಪದಲ್ಲಿ ಖರೀದಿಸಿ, ಪಕ್ಕದ ಆಂಧ್ರ ಪ್ರದೇಶದ ವಿವಿಧೆಡೆ ಪೂರೈಸಲಾಗುತ್ತಿದೆ ಎನ್ನುವ ದೂರುಗಳಿದ್ದವು.
ಸ್ಥಳೀಯ ಸಬ್ ಇನ್ಸ್ಪೆಕ್ಟರ್ ಲಕ್ಕಪ್ಪ ಬಿ. ಅಗ್ನಿ ಮತ್ತು ಸಿಬ್ಬಂದಿ ಮುತ್ತಣ್ಣ, ಸಿದ್ದನಗೌಡ, ಗ್ಯಾನಪ್ಪ, ಭೀಮಣ್ಣ, ಮಾರುತಿಯವರನ್ನೊಳಗೊಂಡ ತಂಡವು ಇಲ್ಲಿಯ ರಿಲಾಯನ್ಸ್ ಪೆಟ್ರೋಲ್
ಬಂಕ್ ಬಳಿ ಅನಧಿಕೃತ ಮದ್ಯ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡರಲ್ಲದೇ, ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ತಾಲ್ಲೂಕಿನ ಮೈಲಾಪುರ ಗ್ರಾಮದ ಶ್ರೀಧರ ಸುರೇಶ ಈಡಿಗೇರ ಎಂಬುವವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮದ್ಯ ನೀಡಿರುವ ಬಾರ್ ಮಾಲೀಕರ
ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
3 ತಿಂಗಳ ಹಿಂದೆ ಸಿದ್ದಾಪುರದ ಮದ್ಯದ ಅಂಗಡಿಯ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದಾಗ ಸಿರುಗುಪ್ಪ ತಾಲ್ಲೂಕಿನ ಹಚ್ಚೊಳ್ಳಿ ಪೊಲೀಸರು ದಾಳಿ ನಡೆಸಿ, ಅಕ್ರಮ ಮದ್ಯವನ್ನು
ವಶಪಡಿಸಿಕೊಂಡಿದ್ದರು.
ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮೂಲಗಳು
ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.