ಕೊಪ್ಪಳ: ಇಲ್ಲಿನ ಕುಷ್ಟಗಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ರೈಲ್ವೆ ಮೇಲ್ಸೇತುವೆಯನ್ನು ಜ. 14ರಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ.
ಎರಡು ದಿನಗಳ ಹಿಂದೆಯೇ ಈ ಕಾರ್ಯಕ್ರಮ ನಿಗದಿಯಾಗಿದ್ದರೂ ಸೋಮಣ್ಣ ಅವರು ಬರುವುದಾಗಿ ತಿಳಿಸಿದ್ದರಿಂದ ಮೇಲ್ಸೇತುವೆ ಉದ್ಘಾಟನೆ ಮುಂದೂಡಲಾಗಿತ್ತು. ಇದರ ಬದಲು ಆ ರಸ್ತೆಗೆ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಎಂದು ಹೆಸರು ನಾಮಕರಣ ಮಾಡಿ ಕಾರ್ಯಕ್ರಮ ನಡೆಸಲಾಗಿತ್ತು.
ಮನವಿ ಸಲ್ಲಿಕೆ: ‘ಸುಮಾರು ವರ್ಷಗಳಿಂದ ನಡೆಯುತ್ತಿರುವ ಗದಗ-ವಾಡಿ ಹೊಸ ರೈಲು ಮಾರ್ಗ ಕಾಮಗಾರಿ ಕುಷ್ಟಗಿಯವರೆಗೆ ಮುಗಿದಿದ್ದು, ಕುಷ್ಟಗಿವರೆಗೆ ರೈಲು ಓಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಎಸ್. ಕ್ಯಾವಟರ್ ಹಾಗೂ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಗುರುವಾರ ಬೆಂಗಳೂರಿನಲ್ಲಿ ವಿ.ಸೋಮಣ್ಣ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.
‘ಗದಗ ವಾಡಿ ರೈಲ್ವೆ ಕಾಮಗಾರಿಯು ಕುಷ್ಟಗಿಯವರೆಗೆ ಪೂರ್ಣಗೊಂಡಿದೆ. ಅಲ್ಲಿಯವರೆಗೆ ರೈಲು ಓಡಿಸಬೇಕು. ಇದರಿಂದ ಕುಷ್ಟಗಿ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಜನರ ಅನುಕೂಲಕ್ಕಾಗಿ ಆದಷ್ಟು ಬೇಗನೆ ಕುಷ್ಟಗಿ ಮೇಲ್ಸೇತುವೆ ಲೋಕಾರ್ಪಣೆ ಮಾಡಬೇಕು’ ಎಂದು ಕೋರಿದ್ದಾರೆ.
‘2025-26ನೇ ಸಾಲಿನ ಬಜೆಟ್ನಲ್ಲಿ ಭಾಗಲಕೋಟೆ ಗಂಗಾವತಿ, ದರೋಜಿ ಗಂಗಾವತಿ, ಆಲಮಟ್ಟಿ ಚಿತ್ರದುರ್ಗ ರೈಲು ಮಾರ್ಗಗಳಿಗೆ ಅನುದಾನ ಒಪದಗಿಸಬೇಕು. ಕೊಪ್ಪಳ, ಹುಲಗಿ, ಮುನಿರಬಾದ್ ರೈಲು ನಿಲ್ದಾಣಗಳ ನವೀಕರಣ ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.