ADVERTISEMENT

ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಒತ್ತಾಯ

ನಗರಸಭೆ ಬಜೆಟ್‌: ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:03 IST
Last Updated 1 ಫೆಬ್ರುವರಿ 2026, 5:03 IST
ಕೊಪ್ಪಳ ನಗರಸಭೆಯಲ್ಲಿ ಶನಿವಾರ ಬಜೆಟ್‌ ಪೂರ್ವಭಾವಿಯಾಗಿ ಸಾರ್ವಜನಿಕರ ಜೊತೆ ಸಮಾಲೋಚನಾ ಸಭೆ ನಡೆಯಿತು
ಕೊಪ್ಪಳ ನಗರಸಭೆಯಲ್ಲಿ ಶನಿವಾರ ಬಜೆಟ್‌ ಪೂರ್ವಭಾವಿಯಾಗಿ ಸಾರ್ವಜನಿಕರ ಜೊತೆ ಸಮಾಲೋಚನಾ ಸಭೆ ನಡೆಯಿತು   

ಕೊಪ್ಪಳ: ನಗರದಲ್ಲಿ ಸರಿಯಾಗಿ ಕುಡಿಯುವ ನೀರು, ನಿಯಮಿತವಾಗಿ ಚರಂಡಿ ಸ್ವಚ್ಛತೆ, ಬಡಾವಣೆಗಳಲ್ಲಿ ಉತ್ತಮ ರಸ್ತೆಗಳು ಮತ್ತು ಹಿರಿಯ ನಾಗರಿಕರ ಮುಸ್ಸಂಜೆಯ ದಿನಗಳನ್ನು ನೆಮ್ಮದಿಯಾಗಿ ಕಳೆಯಲು ಉದ್ಯಾನಗಳ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ನಗರದ ಸಾರ್ವಜನಿಕರು ನಗರಸಭೆಗೆ ಮನವಿ ಮಾಡಿದರು.

ಕೊಪ್ಪಳ ನಗರಸಭೆಯ ಬಜೆಟ್‌ ಪೂರ್ವಭಾವಿಯಾಗಿ ಶನಿವಾರ ನಡೆದ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಜನ ಬೇಡಿಕೆಗಳನ್ನು ಅಧಿಕಾರಿಗಳು ಮುಂದಿಟ್ಟರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶನ ಮಂಜುನಾಥ ಗುಂಡೂರು, ಪೌರಾಯುಕ್ತ ವೆಂಕಟೇಶ್ ನಾಗನೂರು ಅವರು ಜನರ ಸಾರ್ವಜನಿಕರ ಬೇಡಿಕೆಗಳ ಪಟ್ಟಿ ಹೇಳಿದಾಗ ಅದನ್ನು ದಾಖಲಿಸಿಕೊಂಡು ಬಜೆಟ್‌ನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

‘ವಿದ್ಯುತ್ ತಂತಿಗಳನ್ನು ಭೂಮಿಯೊಳಗೆ ಅಳವಡಿಸಬೇಕು, ನಗರವನ್ನು ಹಸಿರುಕರಣ ಮಾಡಬೇಕು, ನಗರ ಪೊಲೀಸ್ ಠಾಣೆ ಬಳಿಯ ಸಾರ್ವಜನಿಕ ಶೌಚಾಲಯದ ಹತ್ತಿರ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳ ಕಣ್ಣಿಗೆ ರಾಚುವಂತೆ ವಿಪರೀತ ಗಿಡಗಳು ಹುಲುಸಾಗಿ ಬೆಳೆದು ನಿಂತಿವೆ, ನಗರದ ನೈರ್ಮಲೀಕರಣಕ್ಕೆ ಒತ್ತು ಕೊಡಬೇಕು. ರಾಜ ಕಾಲುವೆ ತುಂಡು ಕಳಪೆ ಕಾಮಗಾರಿ ಮಾಡುವುದನ್ನು ನಿಲ್ಲಿಸಲು ಕ್ರಮ ವಹಿಸಬೇಕು’ ಎಂದು ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಯಿತು. 

ADVERTISEMENT

ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು, 24X7 ಕುಡಿಯುವ ನೀರಿನ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಬೇಕು, ಭಾಗ್ಯನಗರವನ್ನು ಕೊಪ್ಪಳ ನಗರಸಭೆ ವ್ಯಾಪ್ತಿಗೆ ಸೇರಿಸಬೇಕು ಎನ್ನುವ ಬೇಡಿಕೆಗಳನ್ನು ಹೋರಾಟಗಾರರು ಮುಂದಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.