ADVERTISEMENT

ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ

‘ಅಂಜನಾದ್ರಿಯಲ್ಲಿ ವಿಶ್ವವೇ ಹೆಮ್ಮೆ ಪಡುವ ರೀತಿಯಲ್ಲಿ ಅಭಿವೃದ್ಧಿ ಮಾಡುವೆ’

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 15:31 IST
Last Updated 11 ಜನವರಿ 2023, 15:31 IST
ಗಂಗಾವತಿಯಲ್ಲಿ ಬಳಿ ಬುಧವಾರ ನಡೆದ ಕೆಆರ್ ಪಿಪಿ ಪಕ್ಷದ ರಾಜಕೀಯ ಸಮಾವೇಶಕ್ಕೆ ಗಣ್ಯರು ಚಾಲನೆ ನೀಡಿದರು
ಗಂಗಾವತಿಯಲ್ಲಿ ಬಳಿ ಬುಧವಾರ ನಡೆದ ಕೆಆರ್ ಪಿಪಿ ಪಕ್ಷದ ರಾಜಕೀಯ ಸಮಾವೇಶಕ್ಕೆ ಗಣ್ಯರು ಚಾಲನೆ ನೀಡಿದರು   

ಗಂಗಾವತಿ (ಕೊಪ್ಪಳ ಜಿಲ್ಲೆ): ಹೊಸ ಪಕ್ಷದ ಮೂಲಕ ರಾಜಕೀಯ ಮರುಶಕ್ತಿ ಸ್ಥಾಪಿಸುವ ಉದ್ದೇಶ ಹೊಂದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಬುಧವಾರ ತಮ್ಮ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಬಲ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಂಡರು.

ನಗರದ ಕ್ರಿಯೇಟಿವ್ ಲೇಔಟ್ ಪಾರ್ಕ್ ಬಳಿ ರೆಡ್ಡಿ ನಿವಾಸದ ಬಳಿ ನಡೆದ ಕೆಆರ್‌ಪಿಪಿ ಪಕ್ಷದ ಸಮಾವೇಶದಲ್ಲಿ ಮಾತನಾಡಿ ‘ರಾಜಕೀಯ ಬದುಕಿಗೆ ಪುನರ್‌ಜನ್ಮ ನೀಡಿದ ಗಂಗಾವತಿ ಕ್ಷೇತ್ರದ ಅಂಜನಾದ್ರಿಯನ್ನು ಜಗತ್ತು ಮೆಚ್ಚುವ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ’ ಎಂದರು.

‘12 ವರ್ಷಗಳ ವನವಾಸದ ನಂತರ ಜನಸೇವೆ ಮಾಡುವ ಅವಕಾಶ ದೊರೆತಿದ್ದು, ಕ್ಷೇತ್ರ ಮತ್ತು ಜನರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಂಜನಾದ್ರಿ ಅಭಿವೃದ್ಧಿಗೆ ಭೂಮಿ ಕೊಡುವ ಎಲ್ಲ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಜೊತೆಗೆ ಪ್ರವಾಸೋದ್ಯಮ ಹೆಚ್ಚಿಸಿ ಯುವಜನತೆಗೆ ಉದ್ಯೋಗ ಸೃಷ್ಟಿಯ ಬಗ್ಗೆ ಚಿಂತನೆ ನಡೆಸಿದ್ದು, ಇದು ಜನಾಶೀರ್ವಾದದಿಂದ ಮಾತ್ರ ಸಾಧ್ಯ. ಕ್ಷೇತ್ರದ ಪ್ರತಿ ವಾರ್ಡ್‌ಗಳಲ್ಲಿ ಓಡಾಡಿ ಜನರ ಸಮಸ್ಯೆ ಆಲಿಸುವೆ’ ಎಂದರು.

ADVERTISEMENT

‘ಗಂಗಾವತಿಯಿಂದ ಬಸವನಬಾಗೇವಾಡಿ, ಬೀದರ್‌ ಜಿಲ್ಲೆಯ ಅನುಭವ ಮಂಟಪದವರೆಗೆ ನನ್ನ ಪಕ್ಷವನ್ನು ಅಭಿವೃದ್ಧಿ ಮಾಡುವೆ. ಎಲ್ಲ ಜನತೆ ಜಾತಿ, ಮತ, ಧರ್ಮ ಬೇಧ-ಬಾವ ಬಿಟ್ಟು ಪ್ರೀತಿ ತೋರಬೇಕು. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಯೋಜನೆಗಳನ್ನು ರೂಪಿಸಲಾಗಿದ್ದು, 2023ರ ಮೇ ಮೊದಲು 2028ರ ನಂತರ ಗಂಗಾವತಿ ಕ್ಷೇತ್ರದ ಜನ ಅಭಿವೃದ್ಧಿ ನೋಡಿ ಸಂಭ್ರಮಿಸಬೇಕು. ಅದರಂತೆ ಕೆಲಸ ಮಾಡುವೆ’ ಎಂದು ಭರವಸೆ ನೀಡಿದರು.

ಸುರಪುರ ತಾಲ್ಲೂಕಿನ ಶಿವಮೂರ್ತಿ ಶಿವಾಚಾರ್ಯ, ಮೌಲ್ವಿ ಸೈಯದ್ ಮುಕ್ತಾರ್ ಖಾದ್ರಿ, ಫಾದರ್ ಜೀವ ಪ್ರಕಾಶ್, ಹಡೆಗಿಮುದ್ರ ಸ್ವಾಮೀಜಿ ಮಾತನಾಡಿದರು.

ಇದಕ್ಕೂ ಮುನ್ನ ಗಂಗಾವತಿ ಕೃಷ್ಣದೇವರಾಯ ವೃತ್ತದಿಂದ ಬಸವಣ್ಣ, ಗಾಂಧಿ, ಮಹಾವೀರ, ಸಿಬಿಎಸ್ ವೃತ್ತ ಮಾರ್ಗವಾಗಿ ತೆರೆದ ವಾಹನದಲ್ಲಿ ಜನಾರ್ದನ ರೆಡ್ಡಿ ಮೆರವಣಿಗೆ ಮತ್ತು ಬೈಕ್ ರ್‍ಯಾಲಿ ಜರುಗಿತು.

ಅಲಮೇಲದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತಡವಲಗ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಮದಾಪುರ ಮುರುಘೇಂದ್ರ ಸ್ವಾಮೀಜಿ, ದೋರವಳ್ಳಿ ಶಿವಲಿಂಗರಾಜೇಂದ್ರ ಸ್ವಾಮೀಜಿ, ಅಗರಕೇಡ ಪ್ರಭುಲಿಂಗ ಸ್ವಾಮೀಜಿ ಸೇರಿ ಸ್ಥಳೀಯ ಜನಪ್ರತಿನಿಧಿಗಳು, ಅಭಿಮಾನಿಗಳು ಕೆಆರ್‌ಪಿಪಿ ಪಕ್ಷದ ಕಾರ್ಯಕರ್ತರು ಇದ್ದರು.

ಪಕ್ಷ ಸೇರಿದ ಬಿಜೆಪಿ, ಕಾಂಗ್ರೆಸ್‌ ಮುಖಂಡರು

ಗಂಗಾವತಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರು ಸೇರ್ಪಡೆಯಾದರು.

ಮಂಗಳವಾರ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಯಮನೂರ ಚೌಡ್ಕಿ, ನಗರ ಯೋಜನಾ ಪ್ರಾಧಿಕಾರ ಸದಸ್ಯ ಮನೋಹರಗೌಡ ಹೇರೂರು, ವೀರೇಶ ಬಲಕುಂದಿ, ನಾಗರಾಜ ಚಳಗೇರಿ, ವೀರೇಶ ಸೂಳೆಕಲ್, ಚನ್ನವೀರನಗೌಡ ಕೋರಿ, ಶಿವಕುಮಾರ ಆದೋನಿ, ದುರುಗಪ್ಪ ಆಗೋಲಿ, ರಮೇಶ ಹೊಸಮನಿ, ಚಂದ್ರು ಹೇರೂರ, ಕಾಂಗ್ರೆಸ್ ಎಸ್‌ಸಿ ಮೋರ್ಚಾ ಗ್ರಾಮೀಣ ಘಟಕದ ಅಧ್ಯಕ್ಷ ಬಾಲಪ್ಪ ಕಾಮದೊಡ್ಡಿ ಸೇರಿ 150ಕ್ಕೂ ಹೆಚ್ಚು ಕಾರ್ಯಕರ್ತರು ಕೆಆರ್‌ಪಿಪಿ ಸೇರಿದ್ದಾರೆ.

ಕೊಪ್ಪಳದಲ್ಲಿ ಸಭೆ; ಹಲವರ ಸೇರ್ಪಡೆ

ಕೊಪ್ಪಳ: ಎರಡು ದಿನಗಳ ಹಿಂದೆ ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ರೆಡ್ಡಿ ಪಕ್ಷಕ್ಕೆ ಹಲವರು ಸೇರ್ಪಡೆಯಾದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಶಂಕ್ರಪ್ಪ ಅಂಡಗಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದ್ಯಾಮಣ್ಣ ಲೇಬಗೇರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭರಮಪ್ಪ ಗೊರವರ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಪಕ್ಷ ಸೇರಿದರು.

ಕಣವಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದು ಇತ್ತೀಚೆಗೆ ರೆಡ್ಡಿ ಅವರಲ್ಲಿ ಈ ಕುರಿತು ಮನವಿ ಸಲ್ಲಿಸಿದ್ದಾರೆ.

‘ಕೊಪ್ಪಳ ಕ್ಷೇತ್ರಕ್ಕೆ ಟಿಕೆಟ್‌ ನೀಡುವಂತೆ ಕೇಳಿದ್ದೇನೆ. ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ’ ಎಂದು ಕಣವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.