ADVERTISEMENT

ಗಂಗಾವತಿಯಲ್ಲಿ ಕರ್ಫ್ಯೂಗೆ ವ್ಯಾಪಕ ಬೆಂಬಲ

ಅಂಗಡಿ, ಮುಂಗಟ್ಟುಗಳು ಬಂದ್‌: ವಾಹನ ಸಂಚಾರ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 11:12 IST
Last Updated 24 ಮಾರ್ಚ್ 2020, 11:12 IST
ಗಂಗಾವತಿಯ ಸಂತೆ ಬಯಲಿನ ದೃಶ್ಯ
ಗಂಗಾವತಿಯ ಸಂತೆ ಬಯಲಿನ ದೃಶ್ಯ   

ಗಂಗಾವತಿ: ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ ತಡೆಯುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ ದೇಶಾದ್ಯಂತ ಕರೆಕೊಟ್ಟಿದ್ದ ಜನತಾ ಕರ್ಫ್ಯೂಗೆ ತಾಲ್ಲೂಕಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ನಗರದ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಲಾಗಿತ್ತು.

ನಗರದ ಪ್ರಮುಖ ಸ್ಥಳಗಳಾದ ಶ್ರೀ ಕೃಷ್ಣದೇವರಾಯ ವೃತ್ತ, ಅಂಬೇಡ್ಕರ್‌ ಸರ್ಕಲ್‌, ಗಾಂಧಿ ವೃತ್ತ, ಮಹಾವೀರ ಸರ್ಕಲ್‌, ಗಣೇಶ ಸರ್ಕಲ್‌, ಜುಲಾಯಿ ನಗರ, ಇಸ್ಲಾಂಪುರ ಸರ್ಕಲ್‌, ಸಿಬಿಎಸ್‌ ಸರ್ಕಲ್‌ ಸೇರಿದಂತೆ ಎಲ್ಲಾ ಕಡೆ ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿತ್ತು.

ADVERTISEMENT

ಹಾಲು ಕೇಂದ್ರ, ಔಷಧಿ ಅಂಗಡಿ, ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಗಂಗಾವತಿ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ರಸ್ತೆಗಳಲ್ಲಿ ಯಾವುದೇ ರೀತಿಯ ಸಾರ್ವಜನಿಕ ಸಾರಿಗೆಗಳಾದ ಬಸ್‌, ಆಟೋ ಹಾಗೂ ಇನ್ನಿತರ ಯಾವುದೇ ವಾಹನಗಳ ಸಂಚಾರ ಇರಲಿಲ್ಲ. ಬಸ್‌ ನಿಲ್ದಾಣದಲ್ಲಿಯೂ ಯಾವುದೇ ಬಸ್‌ಗಳಿಲ್ಲದೆ ಭಣಗುಡುತಿತ್ತು.

ಮನೆಯಿಂದ ಆಚೆ ಬಾರದ ಜನ : ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಪ್ಯೂಗೆ ಕರೆಕೊಟ್ಟ ಹಿನ್ನಲೆಯಲ್ಲಿ ನಗರದ ಜನರು ಯಾರೂ ಮನೆಬಿಟ್ಟು ಆಚೆ ಬರಲಿಲ್ಲ. ಮನೆಯಲ್ಲಿಯೇ ಕುಳಿತು ಟಿವಿ ನೋಡುವ ಮೂಲಕ ದೇಶದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಗಮನ ಹರಿಸಿದರು. ಇನ್ನು, ಕೆಲ ಏರಿಯಾಗಳಲ್ಲಿ ಅಲಲ್ಲಿ ಹಿರಿಯರು ಕಟ್ಟೆಗಳ ಮೇಲೆ ಕುಳಿತು ಹರಟೆ ಹೊಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು.

ವಾರದ ಸಂತೆ ಬಂದ್‌ : ಕೊರೊನಾ ಭೀತಿಯಿಂದ ಕಳೆದೆರೆಡು ದಿನಗಳ ಹಿಂದೆಯೆ ವಾರದ ಸಂತೆಯನ್ನು ಬಂದ್‌ ಮಾಡುವಂತೆ ನಗರಸಭೆಯು ವ್ಯಾಪಾರಸ್ಥರಿಗೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಭಾನುವಾರ ನಗರದ ವಾರದ ಸಂತೆಬಯಲು, ಡೈಲಿ ಮಾರ್ಕೆಟ್‌ ನಲ್ಲಿ ವ್ಯಾಪಾರಿಗಳು ಮನೆಯಿಂದ ಆಚೆ ಬಾರದೆ, ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸಿದರು.

ದೇವಸ್ಥಾನಗಳು ಬಂದ್‌ : ಇನ್ನು, ನಗರದ ಪ್ರಮುಖ ದೇವಸ್ಥಾನಗಳಾದ ಶ್ರೀ ಚನ್ನಮಲ್ಲಿಕಾರ್ಜುನ ಮಠ, ನೀಲಕಂಠೇಶ್ವರ ದೇವಸ್ಥಾನ, ಕೋಟೆ ವೀರಭದ್ರೇಶ್ವರ, ಪಂಪಾವಿರೂಪಾಕ್ಷೇಶ್ವರ, ನಗರೇಶ್ವರ ದೇವಸ್ಥಾನದ ಸೇರಿದಂತೆ ನಗರದ ನಾನಾ ದೇವಸ್ಥಾನಗಳನ್ನು ಬಂದ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.